ಮೈಸೂರಿನ ಬೋಗಾದಿಯಲ್ಲಿ ಕೆನರಾ ಬ್ಯಾಂಕ್ ನೂತನ ಶಾಖೆಯನ್ನು ಉದ್ಘಾಟಿಸಿದ ಚೀಫ್ ಜನರಲ್ ಮ್ಯಾನೇಜರ್ ಅರುಣ್ ಕುಮಾರ್ ಮಿಶ್ರಾ

ಮೈಸೂರು : ನಗರದ ಬೋಗಾದಿಯಲ್ಲಿ ಆರಂಭವಾದ ಕೆನರಾ ಬ್ಯಾಂಕ್ ನೂತನ ಶಾಖೆಯನ್ನು ಕೆನರಾ ಬ್ಯಾಂಕಿನ ಚೀಫ್ ಜನರಲ್ ಮ್ಯಾನೇಜರ್  ಅರುಣ್ ಕುಮಾರ್ ಮಿಶ್ರಾ ಅವರು ಸೋಮವಾರ ಬೆಳಗ್ಗೆ ಟೇಪ್ ಕತ್ತರಿಸಿ ಮತ್ತು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು. 

ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ ಅರುಣ್ ಕುಮಾರ್ ಮಿಶ್ರಾ ಅವರನ್ನು ಡಿಜಿಎಂ ಮನೋಜ್ ಕುಮಾರ್ ರಮಣ್ ಇತರರು ಆತ್ಮೀಯವಾಗಿ ಸ್ವಾಗತಿಸಿದರು.

ನಂತರ ಬ್ಯಾಂಕಿನಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಅರುಣ್ ಕುಮಾರ್ ಮಿಶ್ರಾ ಭಾಗವಹಿಸಿ ಬ್ಯಾಂಕ್ ಸಂಸ್ಥಾಪಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಬ್ಯಾಂಕಿನ ಲಾಕರ್ ಸೌಲಭ್ಯ, ಎಟಿಎಂ ಕೇಂದ್ರ ವೀಕ್ಷಿಸಿದರು.

ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ  ಡಿಜಿಎಂ ಮನೋಜ್ ಕುಮಾರ್ ರಮಣ್ ಮಾತನಾಡಿ, ಕೆನರಾ ಬ್ಯಾಂಕ್‌ನಲ್ಲಿ ಗ್ರಾಹಕರಿಗೆ ವಿವಿಧ ರೀತಿಯ ಉಳಿತಾಯ ಖಾತೆಗಳು, ಆಕರ್ಷಕ ಬಡ್ಡಿ ದರದ ಸಾಲ ಸೌಲಭ್ಯಗಳು, ಮೊಬೈಲ್ ಬ್ಯಾಂಕಿಂಗ್, ಮತ್ತು ವಿಮೆ ಸೌಲಭ್ಯಗಳು, ಹೂಡಿಕೆ ಯೋಜನೆಗಳು ಹಾಗೂ ಆದ್ಯತಾ ಬ್ಯಾಂಕಿಂಗ್ ಸೇವೆಗಳ ಬಗ್ಗೆ ಮಾಹಿತಿ ನೀಡಿದರು.

ಬ್ರಾಂಚ್ ಮ್ಯಾನೇಜರ್ ಕಾರ್ತಿಕ್ ಮಾತನಾಡಿ, ಬೋಗಾದಿ ಶಾಖೆಯಲ್ಲಿ ವಿವಿಧ ಸಾಲ ಸೌಲಭ್ಯಗಳಾದ ಗೃಹ ಸಾಲ, ವಾಹನ ಸಾಲ, ಕಡಿಮೆ ಬಡ್ಡಿ ದರದ ವೈಯಕ್ತಿಕ ಸಾಲ, ತುರ್ತು ಅಗತ್ಯಗಳಿಗೆ ಚಿನ್ನದ ಮೇಲಿನ ಸಾಲ, ವ್ಯಾಪಾರಾಭಿವೃದ್ಧಿ ಓಡಿ, ಶಿಕ್ಷಣ ಸಾಲ, ಕೃಷಿಕರಿಗೆ ಬೆಳೆ ಸಾಲ ಮತ್ತು ಜಮೀನು ಅಭಿವೃದ್ಧಿ ಸಾಲ, ಮಹಿಳೆಯರಿಗೆ ಕೆನರಾ ಸ್ತ್ರೀ ಶಕ್ತಿ ಸಾಲ, ಖಾತೆ ಮತ್ತು ಠೇವಣಿ ಸೌಲಭ್ಯಗಳು, ಸಾಮಾನ್ಯ ಉಳಿತಾಯ ಖಾತೆ, ಕರೆಂಟ್ ಅಕೌಂಟ್ ಇತರೆ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಬ್ಯಾಂಕಿಗೆ ಕಟ್ಟಡ ಒದಗಿಸಿದ ಮಾಲೀಕರನ್ನು ಗೌರವಿಸಲಾಯಿತು.

ಕೆನರಾ ಬ್ಯಾಂಕಿನ ವಿವಿಧ ಅಧಿಕಾರಿಗಳು, ವ್ಯವಸ್ಥಾಪಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.