’ಧರ್ಮಗಳು ಐಕ್ಯತೆ ಕಾಪಾಡಿಕೊಳ್ಳದಿದ್ದರೆ ಜಗತ್ತು ನಾಶ’

 
ಜಮಾತೆ ಇಸ್ಲಾಮಿ ಹಿಂದ್ ಸೌಹಾರ್ಧ ಇಫ್ತಾರ್ ಕೂಟದಲ್ಲಿ ಪ್ರೊ.ಎಸ್.ಶಿವರಾಜಪ್ಪ ಅಭಿಪ್ರಾಯ

ನಜೀರ್ ಅಹಮದ್, ಪಾಂಡವಪುರ
ಮೈಸೂರು : ಮಾನವ ಕುಲದ ಒಳಿತಿಗಾಗಿ ಜಗತ್ತಿನ ಎಲ್ಲ ಧರ್ಮಗಳೂ ಪರಸ್ಪರ ಐಕ್ಯತೆ ಕಾಪಾಡಿಕೊಳ್ಳದಿದ್ದರೆ ಜಗತ್ತು ನಾಶವಾಗುವುದು ಖಚಿತ ಎಂದು ಮೈಸೂರು ವಿವಿ ಪ್ರಾಚ್ಯ ವಿದ್ಯಾ ಸಂಶೋಧನಾ ಕೇಂದ್ರದ ವಿಶ್ರಾಂತ ನಿರ್ದೇಶಕರಾದ ಪ್ರೊ.ಎಸ್.ಶಿವರಾಜಪ್ಪ ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಜಮಾತೆ ಇಸ್ಲಾಮಿ ಹಿಂದ್ ಮೈಸೂರು ವಿಭಾಗದಿಂದ ಏರ್ಪಡಿಸಿದ್ದ ರಂಜಾನ್ ಇಫ್ತಾರ್ ಸೌಹಾರ್ಧ ಕೂಟದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ನಮ್ಮನ್ನು ಆಳುವ ಪ್ರಭುಗಳು ತಮ್ಮ ಕುರ್ಚಿಯನ್ನು ಉಳಿಸಿಕೊಳ್ಳಲು ನಮ್ಮ ದಿಕ್ಕು ತಪ್ಪಿಸುತ್ತಿದ್ದಾರೆ. ತಮ್ಮ ಅಧಿಕಾರದ ದಾಹಕ್ಕಾಗಿ ಧರ್ಮ ಧರ್ಮಗಳನ್ನು ಒಡೆದು ಧರ್ಮ ದಂಗಲ್ ಸೃಷ್ಟಿಸುತ್ತಿದ್ದಾರೆ. ನಮ್ಮನ್ನು ಸರಿದಾರಿಗೆ ಹೋಗಲು ಬಿಡುತ್ತಿಲ್ಲ. ಇದರಿಂದ ಸಮಾಜದ ಸಾಮಾಜಿಕ ಸ್ಥಿತಿ ಗಂಭೀರವಾಗಿದೆ. ನಾವುಗಳು ಜಾಗೃತರಾಗಬೇಕಿದೆ ಎಂದು ಸಲಹೆ ನೀಡಿದರು.
ದೇಶದಲ್ಲಿ ಎಲ್ಲ ಧರ್ಮಿಯರೂ ಶಾಂತಿ, ಸೌಹಾರ್ಧತೆ ಬಯಸಿದರೇ, ರಾಜಕಾರಣಿಗಳು ಮಾತ್ರ ದ್ವೇಷ, ಅಸೂಯೆ ಬಯಸುತ್ತಿದ್ದಾರೆ. ನಮ್ಮ ಕಾನೂನುಗಳು ಎಷ್ಟೇ ಬಿಗಿಯಾಗಿದ್ದರೂ ಅವುಗಳು ಚಲಾವಣೆಗೆ ಬರುತ್ತಿಲ್ಲ. ಇಂದಿನ ಮಾಧ್ಯಮಗಳೂ ಸಹ ಜನರಲ್ಲಿ ಧರ್ಮಗಳ ಅಮಲನ್ನು ತುಂಬುತ್ತಿದ್ದಾರೆ. ನಾವುಗಳು ಎಚ್ಚೆತ್ತುಕೊಳ್ಳದಿದ್ದರೇ ಮುಂದಿನ ದಿನಗಳು ಕಷ್ಟಕರವಾಗುತ್ತವೆ. ಯಾವುದೇ ವೆಚ್ಚವಿಲ್ಲದೇ ಕೇವಲ ಪ್ರೀತಿಯಿಂದ ಶಾಂತಿ ದೊರಕುವಾಗ ಕೊಟ್ಯಾಂತರ ಹಣ ವೆಚ್ಚವಾಗುವ ಯುದ್ಧ ನಮಗೇಕೆ ಬೇಕು. ಮುಂದಿನ ಪೀಳಿಗೆ ಭವಿಷ್ಯವನ್ನು ಮನದಲ್ಲಿಟ್ಟುಕೊಂಡು ನಾವು ಪರಸ್ಪರ ಸೌಹಾರ್ಧತೆಯಿಂದ ಬಾಳಬೇಕಿದೆ. ಬಸವಣ್ಣನವರು ಹೇಳಿದಂತೆ ಭಕ್ತಿಯು ಗರಗಸದಂತೆ ಹೋಗುತ್ತಲೂ ಕುಯ್ಯುತ್ತದೆ, ಬರುತ್ತಲೂ ಕುಯ್ಯುತ್ತದೆ. ಹೀಗಾಗಿ ಭಕ್ತಿಯು ಕೇವಲ ಜಗತ್ತಿನ ಒಳಿತಿಗಾಗಿ ಮಾತ್ರ ಬೇಕಿದೆ ಎಂದು ಹೇಳಿದರು.
 
ಕರ್ನಾಟಕ ಜಮಾತೆ ಇಸ್ಲಾಮಿ ಹಿಂದ್ ಸಹ ಕಾರ್ಯದರ್ಶಿ ರಿಯಾಝ್ ಅಹಮದ್ ರೋಣ ಅವರು ಮಾತನಾಡಿ, ಭಾರತ ಬಹುಸಂಸ್ಕೃತಿಯ ದೇಶವಾಗಿದೆ. ಇಂತಹ ದೇಶದಲ್ಲಿ ಶಾಂತಿಯುತ ಬದುಕು ಕಟ್ಟಿಕೊಳ್ಳಲು ನಾವುಗಳೆಲ್ಲರೂ ಪರಸ್ಪರ ಅನುಸರಿಸುತ್ತಿರುವ ಧರ್ಮಗಳ ಸಂದೇಶಗಳನ್ನು ಮುಕ್ತವಾಗಿ ಹಂಚಿಕೊಳ್ಳಬೇಕಿದೆ. ಜತೆಗೆ ನಮ್ಮ ನಮ್ಮ ಧರ್ಮಗಳ ಬಗ್ಗೆ ಪರಸ್ಪರ ಆರೋಗ್ಯಪೂರ್ಣ ಸಂವಾದಗಳನ್ನು ಏರ್ಪಡಿಸಬೇಕಿದೆ. ಇದರಿಂದ ಸಮಾಜದಲ್ಲಿ ಎಲ್ಲರೂ ಸೌಹಾರ್ಧಯುತ ಜೀವನ ನಡೆಸಲು ಸಾಧ್ಯವಾಗುತ್ತದೆ.
ಇಸ್ಲಾಂ ಧರ್ಮಿಯರು ಇಂದು ಇಫ್ತಾರ್ ಸೌರ್ಹಾರ್ದ ಕೂಟದ ಮೂಲಕ ಅವರ  ಆಚರಣೆಗಳನ್ನು ಇನ್ನಿತರ ಧರ್ಮಿಯರ ಜತೆ ಹಂಚಿಕೊಂಡಂತೆ ಹಿಂದೂ, ಕ್ರೈಸ್ತ ಮತ್ತಿತರ ಧರ್ಮಿಯರೂ ಕೂಡ ನಮ್ಮೆಲ್ಲರನ್ನೂ ಆಹ್ವಾನಿಸಿ ತಮ್ಮ ತಮ್ಮ ಧರ್ಮಗಳ ಆಚಾರ ವಿಚಾರಗಳನ್ನು ನಮ್ಮೊಂದಿಗೆ ಮುಕ್ತವಾಗಿ ಹಂಚಿಕೊಳ್ಳುವುದರಿಂದ ನಮಗೂ ಇತರೆ ಧರ್ಮಗಳ ಸಂದೇಶಗಳು, ಮಾನವೀಯ ಮೌಲ್ಯಗಳ ತಿರುಳನ್ನು ತಿಳಿಸಬೇಕಿದೆ. ಈ ಬೆಳವಣಿಗೆಯಿಂದ ಸಮಾಜದಲ್ಲಿ ಮತ್ತಷ್ಟು ಸೌಹಾರ್ಧತೆ ಬೆಳೆಯಲು ಸಾಧ್ಯವಾಗುತ್ತದೆ ಎಂದರು.
ನಾವೆಲ್ಲರೂ ದೇಶದ ರಾಜಕೀಯ, ಕೈಗಾರಿಕೆ, ಉದ್ಯೋಗ, ಕಲೆ ಸಾಹಿತ್ಯ ಮತ್ತಿತರ ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡುತ್ತೇವೆ. ಆದರೇ ನಮ್ಮ ನಮ್ಮ ಧರ್ಮಗಳ ಬಗ್ಗೆ ನಾವುಗಳು ಎಂದಿಗೂ ಮುಕ್ತವಾಗಿ ಮಾತನಾಡುವುದಿಲ್ಲ. ಧರ್ಮಗಳ ಬಗ್ಗೆ ಏನೂ ಅರಿಯದ ಮಾಧ್ಯಮಗಳು ಇಂದು ಧರ್ಮಗಳ ಕುರಿತು ಮಾತನಾಡುತ್ತವೆ. ಅದು ಕೂಡ ಸಮಾಜದಲ್ಲಿ ಸೌಹಾರ್ಧತೆ ಕಲಕುವ ವಿಚಾರವನ್ನು ಮಾತ್ರ ಪ್ರಸ್ತಾಪಿಸುತ್ತವೆ. ಇದಕ್ಕೆ ನಾವು ಅವಕಾಶ ಮಾಡಿಕೊಡಬಾರದು. ನಮ್ಮ ಧರ್ಮಗಳ ಬಗ್ಗೆ ನಾವುಗಳೇ ಮಾತನಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಸಭಿಕರಿಗೆ ಹಣ್ಣು ಹಂಪಲು ವಿತರಣೆ ಮಾಡಲಾಯಿತು. ಬಳಿಕ ಪ್ರಾರ್ಥನೆ ಮಾಡಲಾಯಿತು. ಬಳಿಕ ಸಾಮೂಹಿಕ ಸೌಹಾರ್ಧ ಇಫ್ತಾರ್ ಕೂಟ ನಡೆಯಿತು. 
ಜಮಾತೇ ಇಸ್ಲಾಮಿ ಹಿಂದ್ ಮೈಸೂರು ವಿಭಾಗದ ಅಧ್ಯಕ್ಷರಾದ ಮಹಮ್ಮದ್ ಅಸ್ಲಂ, ಝಬಿಯುಲ್ಲಾ, ಅಬ್ದುಲ್ ಘಫಾರ್ ಬೇಗ್, ಅಸಾದುಲ್ಲಾ ಮುಂತಾದವರು ಇದ್ದರು.

ಕ್ರೈಸ್ತರ ಪವಿತ್ರ ಗ್ರಂಥ ಬೈಬಲ್‌ನ ಹಳೆಯ ಒಡಂಬಡಿಕೆ ಪ್ರಕಾರ ಕ್ರೈಸ್ತ ಧರ್ಮದಲ್ಲಿ ಉಪವಾಸ ವ್ರತ ಆಚರಣೆಯಲ್ಲಿದೆ. ಮುಖ್ಯವಾಗಿ ಪ್ರಾಚೀನ ಕಾಲದ ’ಜ್ಯೂ’ ಸಮುದಾಯ ತಮ್ಮ ಕಷ್ಟ ಕಾಲದಲ್ಲಿ ಉಪವಾಸ ವ್ರತ ಆಚರಿಸುತ್ತಿದ್ದರು ಎಂಬ ಉಲ್ಲೇಖವಿದೆ.   
ಫಾ.ಪ್ಯಾಟ್ರಿಕ್ ಕ್ಸೇವಿಯರ್, ರೆಕ್ಟರ್ ಸೆಂಟ್ ಮೇರಿಸ್ ಸೆಮಿನರಿ 
  


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು