ಅನುಮತಿ ಪಡೆದ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘದಲ್ಲಿ “ನಕಲಿ ಕರಾರು ಪತ್ರ ಸೃಷ್ಟಿ”

ಸರ್ಕಾರಕ್ಕೆ ಕೊಟ್ಯಾಂತರ ರೂ. ವಂಚನೆ; ಗುತ್ತಿಗೆದಾರರ ಆರೋಪ

ಮೈಸೂರು : ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದಲ್ಲಿ ಕಳೆದ ಹಲವಾರು ವರ್ಷಗಳಿಂದ ನಕಲಿ ಕರಾರು ಪತ್ರಗಳನ್ನು ಸೃಷ್ಟಿಸಿ ಸರ್ಕಾರಕ್ಕೆ ಕೊಟ್ಯಾಂತರ ರೂ. ರಾಜಧನ ವಂಚನೆ ಮಾಡಿದ್ದು, ಸರ್ಕಾರ ಸದರಿ ಸಂಘವನ್ನು ಸೂಪರ್ ಸೀಡ್ ಮಾಡಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕೆಂದು ಪ್ರಥಮ ದರ್ಜೆ ವಿದ್ಯುತ್ ಗುತ್ತಿಗೆದಾರ ಹಾಗೂ ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿ ಆರ್. ಶ್ರೀಪಾಲ್ ಒತ್ತಾಯಿಸಿದರು. 
ನಗರದ ಗೋವರ್ಧನ್ ಹೋಟೆಲ್ನಲ್ಲಿಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿಂದೆ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘಕ್ಕೆ ನೋಂದಣಿ ಮತ್ತು ಮುಂದ್ರಾಂಕ ಇಲಾಖೆಯಿಂದ ಫ್ರಾಂಕ್ಲಿನ್ ಯಂತ್ರ ನೀಡಲಾಗಿತ್ತು. ಅದನ್ನು ಬಳಸಿಕೊಂಡು ಸಂಘದ ರಾಜ್ಯ ಘಟಕ ಭಾರಿ ವಂಚನೆ ನಡೆಸಿದ್ದ ಕಾರಣ ಇಲಾಖೆ ಪ್ರಾಂಕ್ಲಿನ್ ಯಂತ್ರವನ್ನು ಹಿಂಪಡೆದು ಸಬ್ ರಿಜಿಷ್ಟ್ರಾರ್ ಕಚೇರಿಯಲ್ಲಿ ಕರಾರು ಪತ್ರಗಳನ್ನು ಮಾಡಿಸಿಕೊಳ್ಳುವಂತೆ ಸೂಚನೆ ನೀಡಿತ್ತು. ಆದರೇ, ಖದೀಮರು ೧೦ ಕರಾರು ಪತ್ರಗಳಿಗೆ ನೋಂದಣಾಧಿಕಾರಿಗಳ ಸಹಿ ಪಡೆದು ನೂರಾರು ನಕಲಿ ಕರಾರು ಪತ್ರಗಳನ್ನು ಸೃಷ್ಟಿಸಿ ಕೊಟ್ಯಾಂತರ ರೂ.ವಂಚನೆ ನಡೆಸಿದ್ದಾರೆ. ತುಮಕೂರು ಜಿಲ್ಲೆ ಸಿರಾ ತಾಲ್ಲೂಕಿನಲ್ಲಿ ಮಂಗಳೂರಿನಲ್ಲಿ ಮತ್ತು ಮೈಸೂರಿನ ಪೊಲೀಸ್ ಠಾಣೆಗಳಲ್ಲಿ ನಕಲಿ ಕರಾರು ಪತ್ರ ಮಾರುತ್ತಿದ್ದ ಹಲವು ದಲ್ಲಾಳಿಗಳ ವಿರುದ್ಧ ದೂರು ದಾಖಲಾಗಿದೆ ಎಂದರು.
ರಾಜ್ಯದೆಲ್ಲೆಡೆ ಇವರ ನಕಲಿ ಕರಾರು ಪತ್ರ ಮಾರಾಟ ಜಾಲ ಇಂದಿಗೂ ಕಾರ್ಯನಿರ್ವಹಿಸುತ್ತಿದೆ. ಇದರಿಂದ ಸರ್ಕಾರಕ್ಕೆ ಸುಮಾರು ೪೦ ಕೋಟಿ ರಾಜಧನ ವಂಚನೆಯಾಗಿದೆ. ಸದರಿ ಸಂಘದಲ್ಲಿ ೧೩ ಸಾವಿರ ಸದಸ್ಯರಿದ್ದು, ಪ್ರತಿವರ್ಷ ಸದಸ್ಯರ ನೋಂದಣಿ ಶುಲ್ಕ ತಲಾ ೮೦೦ ರೂ. ಸಂಗ್ರಹಿಸಿ ಅದರಲ್ಲಿ ೬೦೦ ರೂ.ಗಳನ್ನು ಪರಿಹಾರ ನಿಧಿಗೆ ಇಡಲಾಗುತ್ತದೆ. ಆದರೇ, ಸಂಘದ ಪದಾಧಿಕಾರಿಗಳು ಹಣವನ್ನು ಇನ್ನಿತರ ಉದ್ದೇಶಗಳಿಗೆ ಬಳಸಿ ಸಂಘದ ಬೈಲಾ ನಿಯಮ ಉಲ್ಲಂಘನೆ ಮಾಡಿದ್ದಾರೆಂದು ಆರೋಪಿಸಿದರು.

ಸಂಘದ ಅವ್ಯವಹಾರಗಳನ್ನು ಹೈಕೋರ್ಟ್ ಗಮನಕ್ಕೆ ತಂದ ಕಾರಣ ಕೋರ್ಟ್ ಸಂಘದ ಸಾಮಾನ್ಯ ಸಭೆಗೆ ತಡೆಯಾಜ್ಞೆ ನೀಡಿ ಯಥಾಸ್ಥಿತಿ ಕಾಪಾಡುವಂತೆ ನಿರ್ದೇಶನ ನೀಡಿದ್ದರೂ, ಸಂಘದ ಅಧ್ಯಕ್ಷರು ಗದಗ್ನಲ್ಲಿ ಸಂಘದ ಡೈರಿ ಬಿಡುಗಡೆ ಕಾರ್ಯಕ್ರಮ ಏರ್ಪಡಿಸಿದ್ದಾರೆ. ಇದು ಕಾನೂನು ಬಾಹಿರವಾಗಿದೆ. ಬಗ್ಗೆ ಕಾರ್ಯಕ್ರಮದ ಉದ್ಘಾಟಕರಾಗಿರುವ ಸಚಿವ ಎಚ್.ಕೆ.ಪಾಟೀಲ್ ಅವರ ಗಮನಕ್ಕೆ ತರಲಾಗಿದೆ ಎಂದು ಹೇಳಿದರು.
ಸಹಕಾರ ಸಚಿವರ ನಿರ್ದೇಶನದ ಮೇರೆಗೆ ಮಲ್ಲೇಶ್ವರಂ ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿಯಲ್ಲಿ ನಕಲಿಕರಾರು ಪತ್ರಗಳ ವಿಚಾರಣೆ ನಡೆಯುತ್ತಿದೆ. ಸರ್ಕಾರ ಕೂಡಲೇ ನಕಲಿ ಕರಾರು ಪತ್ರಗಳ ಸೃಷ್ಟಿಯ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಥಮ ದರ್ಜೆ ವಿದ್ಯುತ್ ಗುತ್ತಿಗೆದಾರರಾದ ಬಿ.ಎಲ್.ವೆಂಕಟೇಶ್, ನಾಗರಾಜ್, ಆರ್.ಶ್ರೀನಿವಾಸ್ ಇದ್ದರು.
 
 ೧೩ ಸಾವಿರ ಸದಸ್ಯರಿರುವ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದಲ್ಲಿ ಕೊಟ್ಯಾಂತರ ರೂ.ಹಣ ಇದ್ದು, ಭಾರಿ ಅವ್ಯವಹಾರ ನಡೆದು ಸಂಘದ ಹಣವನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ. ಈ ಅವ್ಯವಹಾರ ಬಯಲಾಗುತ್ತದೆ ಎಂದು ಇಂದಿಗೂ ಆಡಿಟ್ ವರದಿ ಮಾಡಿಸಿಲ್ಲ.

ಬಿ.ಎಲ್.ವೆಂಕಟೇಶ್ ಪ್ರಥಮ ದರ್ಜೆ ವಿದ್ಯುತ್ ಗುತ್ತಿಗೆದಾರ

ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದಲ್ಲಿ ಹತ್ತಾರು ಅವ್ಯವಹಾರಗಳು ನಡೆದು ಹಣ ದುರುಪಯೋಗವಾಗಿದೆ. ವಿಶೇಷವಾಗಿ ನಕಲಿಕರಾರು ಪತ್ರ ಸೃಷ್ಟಿಯಿಂದ ಸರ್ಕಾರಕ್ಕೆ ಕೊಟ್ಯಾಂತರ ರೂ.ವಂಚನೆಯಾಗಿದ್ದು, ದೂರು ದಾಖಲಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಯಬೇಕು.

ಆರ್.ಶ್ರೀನಿವಾಸ್, ಪ್ರಥಮ ದರ್ಜೆ ವಿದ್ಯುತ್ ಗುತ್ತಿಗೆದಾರ


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು