ʻಶಿಸ್ತುʼ ನೆಪದಲ್ಲಿ ಮುಖ್ಯೋಪಾಧ್ಯಾಯರಿಂದ ವಿದ್ಯಾರ್ಥಿಗಳಿಗೆ ಕಿರುಕುಳ : ಪೋಷಕರ ಆರೋಪ

 ಸಂತ ಫಿಲೋಮಿನಾ ಪ್ರೌಢಶಾಲೆಯಲ್ಲಿ ಘಟನೆ

ಪೊಲೀಸ್‌, ಮಕ್ಕಳ ಕಲ್ಯಾಣ ಇಲಾಖೆ, ಬಿಇಓಗೆ ದೂರು ನೀಡಲು ನಿರ್ಧಾರ

ಮೈಸೂರು : ಅತಿಯಾದ ಶಿಸ್ತು ಪಾಲನೆ ನೆಪದಲ್ಲಿ ನಗರದ ಸಂತ ಫಿಲೋಮಿನಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರೊಬ್ಬರು ವಿದ್ಯಾರ್ಥಿಗಳಿಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದು, ಅಂಬೇಡ್ಕರ್‌ ಭಾವಚಿತ್ರಕ್ಕೂ ಅಪಮಾನ ಮಾಡಿದ್ದಾರೆಂದು ಮೈಸೂರು ಡಿವಿಜನ್‌ ಕ್ಯಾಥೋಲಿಕ್‌ ಕ್ರಿಶ್ಚಿಯನ್‌ ಅಸೋಸಿಯೇಷನ್‌ ಪದಾಧಿಕಾರಿಗಳು ಆರೋಪಿಸಿದ್ದಾರೆ.


ಮುಖ್ಯೋಪಾಧ್ಯಾಯರಾದ ಸಗಾಯ್‍ರಾಜ್ ವಿದ್ಯಾರ್ಥಿಯೊಬ್ಬನಿಗೆ ಬಾಸುಂಡೆ ಬರುವ ರೀತಿ ಹೊಡೆದಿರುವುದು

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸಮಿತಿ ಅಧ್ಯಕ್ಷ ಜೆ.ಸ್ಟೀಫನ್‌ ಸುಜೀತ್‌ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಎಂಡಿಇಎಸ್‌ ಶಿಕ್ಷಣ ಸಂಸ್ಥೆ ನಡೆಸುತ್ತಿರುವ ಸಂತ ಫಿಲೋಮಿನಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಸಗಾಯ್‌ ರಾಜ್‌ ಎಂಬವರು ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅತಿಯಾದ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ಮಕ್ಕಳು ಈ ಶಾಲೆಗೆ ಹೋಗಲು ಭಯಪಡುತ್ತಿದ್ದಾರೆ. ಶಾಲೆಯು ಮೈಸೂರು ಬೆಂಗಳೂರು ರಸ್ತೆಯ ಅಂಬೇಡ್ಕರ್‌ ಪ್ರತಿಮೆ ಮುಂಭಾಗದಲ್ಲಿದ್ದು, ಈ ಶಾಲೆಯಲ್ಲಿ ಹೆಚ್ಚಾಗಿ ದಲಿತ ಮತ್ತು ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳು ಇದ್ದು, ಮುಖ್ಯೋಪಾಧ್ಯಾಯರ ಕಿರುಕುಳದಿಂದ ಬೇಸತ್ತಿದ್ದಾರೆ. ಶಾಲೆಯಲ್ಲಿ ಮಕ್ಕಳಿಗೆ ಹೊಡೆಯುವುದು. ಹೆಣ್ಣು ಮಕ್ಕಳಿಗೆ ದೇಹದ ಹಿಂಬದಿ ಕಾಣುವಂತೆ ಸ್ಕರ್ಟ್‌ ಮೇಲೆತ್ತಿ ಹೊಡೆಯುವುದು. ಶಾಲೆಗೆ ತಡವಾಗಿ ಬಂದರೆ ಹೆಣ್ಣು ಮಕ್ಕಳಿಗೆ ಯಾರತ್ರ ಮಾತಾಡ್ತಾ ನಿಂತಿದ್ದೆ, ಎಷ್ಟು ಜನ ಬಾಯ್‌ ಫ್ರೆಂಡ್‌ ಮಾಡ್ಕೊಂಡಿದ್ದೀಯಾ ಎಂದು ನಿಂದಿಸುವುದು ಮಾಡುತ್ತಿದ್ದಾರೆ. ಶಾಲೆ 10 ಗಂಟೆಗೆ ಪ್ರಾರಂಭವಾಗಬೇಕೆಂಬ ನಿಯಮ ಇದ್ದರೂ 9 ಗಂಟೆಗೆ ಮಕ್ಕಳನ್ನು ಬರ ಹೇಳುವುದು. ಲೇಟಾಗಿ ಬಂದರೆ ಹೊರಗೆ ನಿಲ್ಲಿಸುವುದು. ಪೋಷಕರನ್ನು ಕರೆತರುವಂತೆ ಒತ್ತಾಯಿಸುವುದು ಮಾಡುತ್ತಾರೆ. ಈ ಭಾಗದಲ್ಲಿ ಹೆಚ್ಚು ಜನ ಕೂಲಿ ಕಾರ್ಮಿಕರ ಮಕ್ಕಳು ಕಲಿಯುತ್ತಿದ್ದು, ಸಣ್ಣ ಪುಟ್ಟ ವಿಚಾರಕ್ಕೆಲ್ಲಾ ಪೋಷಕರನ್ನು ಕರೆಸಿದರೆ ಅವರು ಕೂಲಿ ಬಿಟ್ಟು ಬರಬೇಕಾಗುತ್ತದೆ.  ಸಗಾಯ್‌ರಾಜ್‌ ಅವರ ದುರ್ನಡತೆಯಿಂದ ಮಕ್ಕಳು, ಪೋಷಕರು ಮತ್ತು ಸಹೋದ್ಯೋಗಿಗಳು ಸಹ ರೋಸಿ ಹೋಗಿದ್ದಾರೆ. ಇದರಿಂದ ಕೂಡಲೇ ಇವರ ವಿರುದ್ಧ ಶಿಕ್ಷಣ ಇಲಾಖೆ, ಮಕ್ಕಳ ಕಲ್ಯಾಣ ಸಮಿತಿ ಮತ್ತು ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.


ಸಂತ ಫಲೋಮಿನಾ ಗ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಸಗಾಯ್‍ರಾಜ್ 
ಶಾಲೆಯಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಭಾವಚಿತ್ರವನ್ನು ಇಟ್ಟಿರಲಿಲ್ಲ. ಕೆಲವು ಕಾರ್ಯಕ್ರಮದಲ್ಲಿ ಅಂಬೇಡ್ಕರ್‌ ಅವರ ಭಾವಚಿತ್ರವನ್ನು ನೆಲದ ಮೇಲಿಟ್ಟು ಅವಮಾನ ಮಾಡಿರುವ ಘಟನೆಯೂ ನಡೆದಿದೆ. ಈ ಬಗ್ಗೆ ಆಡಳಿತ ಮಂಡಳಿಗೆ ದೂರು ನೀಡಿದರೂ ಅವರು ಯಾವುದೇ ಕ್ರಮ ಕೈಗೊಳ್ಳದೇ ಸಗಾಯ್‌ರಾಜ್‌ ಅವರ ಎಲ್ಲಾ ಆಟಾಟೋಪಗಳಿಗೆ ಬೆಂಬಲವಾಗಿ ನಿಂತಿದ್ದಾರೆ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಮರಿಯಾ ಫ್ರಾನ್ಸಿಸ್‌, ಬಾರ್ಬರಾ, ಸೈಮನ್‌, ಗ್ಯಾಬ್ರಿಯಲ್‌ ಇದ್ದರು.

ಸಂತ ಫಲೋಮಿನಾ ಗ್ರೌಢಶಾಲೆಯಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರಾದ ಸಗಾಯ್‍ರಾಜ್ ಅಂಬೇಡ್ಕರ್ ಅವರ ಭಾವಚಿತ್ರ ಇಡದಿರುವುದು



 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು