ಗ್ಯಾರಂಟಿಗಳ ಜಾರಿಗೆ ಡೆಡ್ಲೈನ್ ಕೊಡಲು ನಿನ್ಯಾರು? ಸಂಸದ ಪ್ರತಾಪ್ ಸಿಂಹ ವಿರುದ್ಧ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಕಿಡಿ

 

ಮೈಸೂರು : ಕಾಂಗ್ರೆಸ್‌ ಪಕ್ಷ ಚುನಾವಣೆಗೂ ಮುನ್ನ ಮತದಾರರಿಗೆ ನೀಢಿರುವ ಗ್ಯಾರಂಟಿ ಗಳನ್ನು ಜಾರಿ ಮಾಡಲು ಗಡುವು ವಿಧಿಸಲು ನಿನ್ಯಾರು? ಎಂದು ಕೆಪಿಸಿಸಿ ವಕ್ತಾರ ಎಂ.;ಲಕ್ಷ್ಮಣ್‌ ಸಂಸದ ಪ್ರತಾಪ್‌ ಸಿಂಹ ವಿರುದ್ಧ ಕಿಡಿ ಕಾರಿದರು.
ಕಾಂಗ್ರೆಸ್‌ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಮೊದಲು ನೀನು ಮತದಾರರಿಗೆ ನೀಡಿರುವ ಗ್ಯಾರಂಟಿಗಳು, ಭರವಸೆಗಳು ಈಡೇರಿಸಿದ್ದೀಯಾ ಎನ್ನುವುದನ್ನು ಹೇಳಬೇಕು. ಈ ಬಗ್ಗೆ ಉತ್ತರ ಕೇಳಲು ಜೂನ್‌ 1 ರಂದು ನಿಮ್ಮ ಕಚೇರಿಗೆ ಬರುತ್ತೇವೆ  ಎಂದು ತಿರುಗೇಟು ನೀಡಿದರು.
ಸಂಸದ ಪ್ರತಾಪ್‌ ಸಿಂಹ ಮೈಸೂರು-ಕೊಡಗು ಜಿಲ್ಲೆಯ ಮತದಾರರಿಗೆ ಹಲವಾರು ವಾಗ್ದಾನ ಮಾಡಿದ್ದಾರೆ. ಏರ್‌ಪೋರ್ಟ್‌ ರನ್‌ವೇ ಉನ್ನತೀಕರಣ, ಮೈಸೂರು-ಕುಶಾಲನಗರ ರೈಲು ಯೋಜನೆ, ಮೈಸೂರು ರೈಲ್ಬೆ ನಿಲ್ದಾಣದ ಸಮೀಪವಿರುವ ನಾಗನಹಳ್ಳಿ ಟರ್ಮಿನಲ್‌ ನಿರ್ಮಾಣ, ಕಡಕೋಳ ಬಳಿ ಲಾಜಸ್ಟಿಕ್‌ ಯೋಜನೆ, 29,900 ಕೋಟಿ ವೆಚ್ಚದ ಸೆಮಿ ಕಂಡಕ್ಟರ್‌ ಪ್ರಾಜೆಕ್ಟ್‌, ಉಡಾನ್‌ ಯೋಜನೆಯ ಉನ್ನತೀಕರಣ, 150 ಕಿಮೀ ಫೆರಿಫಿರಲ್‌ ರಿಂಗ್‌ ರಸ್ತೆ, ಟೆಕ್ಟ್‌ಟೈಲ್‌ ಪಾರ್ಕ್‌ ನಿರ್ಮಾಣ, ಮೈಸೂರು-ಮಡಿಕೇರಿ ಹೆದ್ದಾರಿ ನಿರ್ಮಾಣ ಸೇರಿದಂತೆ ಹಲವಾರು ಭರವಸೆಗಳನ್ನು ನೀಡಿದ್ದೀರಿ ಇವುಗಳನ್ನು ಕಾರ್ಯರೂಪಕ್ಕೆ ತಂದಿದ್ದರೆ ತೋರಿಸಿದ ಬಳಿಕ ಕಾಂಗ್ರೆಸ್‌ ಪಕ್ಷದ ಗ್ಯಾರಂಟಿಗಳ ಬಗ್ಗೆ ಮಾತನಾಡಿ, ನಮ್ಮ ಸರ್ಕಾರಕ್ಕೆ ಭರವಸೆಗಳನ್ನು ಈಡೇರಿಸುವ ಶಕ್ತಿ ಇದೆ ಮೊದಲು 2018 ರಲ್ಲಿ ಬಿಜೆಪಿ ನೀಡಿದ್ದ ಭರವಸೆಗಳು ಎಷ್ಟು ಈಡೇರಿವೆ ಎನ್ನುವ ಬಗ್ಗೆ ಲೆಕ್ಕ ಕೊಡಲಿ ಎಂದರು.  
ಬಿಜೆಪಿಯವರು ಅಧಿಕಾರ ಕಳೆದುಕೊಂಡು ಹತಾಶಗಾಗಿದ್ದಾರೆ. ಪೂರ್ಣ ಪ್ರಮಾಣದ ಮಂತ್ರಿ ಮಂಡಲ ರಚನೆಗೂ ಮುನ್ನ ಗ್ಯಾರಂಟಿಗಳ ಜಾರಿಗೆ ಬಿಜೆಪಿ ಮತ್ತು ಜೆಡಿಎಸ್‌ ಒತ್ತಾಯ ಮಾಡುತ್ತಿರುವುದು ನಾಚಿಕೆಗೇಡು. ಮಾಡಲು ಕೆಲಸ ಇಲ್ಲದೆ ನೀರಿಲ್ಲದ ನೆಲದ ಮೇಲೆ ಬೋಟ್‌ ಓಡಿಸುವವರು, ಸೆವೆನ್‌ ಪಿಎಂ ಗಿರಾಕಿಗಳು, ಬರಿಗೈಯಲ್ಲಿ ಸಿಟಿ ಹೊಡೆಯುವವರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಈ ರೀತಿ ಕ್ಯಾತೆ ತೆಗೆಯುತ್ತಿದ್ದಾರೆ. ಆದರೇ, ಬಿಜೆಪಿಯ ಇಂತಹ ದುರಂತ ಸ್ಥಿತಿಗೆ ಕಾರಣ ಏನು?  ಎಂಬುದನ್ನು ಯಾರೂ ಹೇಳುತ್ತಿಲ್ಲ ಮತ್ತು ಯಾರೊಬ್ಬರೂ ಸೋಲಿನ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಿಲ್ಲ ಇನ್ನು ನಮ್ಮ ಪಕ್ಷದ ಬಗ್ಗೆ ಮಾತನಾಡಲು ಇವರಿಗೇನು ನೈತಿಕತೆ ಇದೆ ಎಂದರು.
ಮಡಿಕೇರಿಗೆ ಪ್ರತಾಪ ಕಾಲಿಟ್ಟರೆ ಕಲ್ಲು ಹೊಡೆಯುತ್ತಾರೆ :
ಸಂಸದ ಪ್ರತಾಪ್‌ ಸಿಂಹ ಅವರಿಗೆ 8 ವಿಧಾನ ಸಭಾ ಕ್ಷೇತ್ರಗಳು ಸೇರುತ್ತವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ 300ಕ್ಕೂ ಹೆಚ್ಚು ಆರ್‌ಎಸ್‌ಎಸ್‌ ಮತ್ತು ಭಜರಂಗ ದಳ ಕಾರ್ಯಕರ್ತರನ್ನು ವರುಣಾ ಕ್ಷೇತ್ರದಲ್ಲಿ ಕರೆಸಿಕೊಂಡು ಅಲ್ಲಿ ಕೋಮು ಗಲಭೆ ಸೃಷ್ಟಿಸಿ ಸಿದ್ದರಾಮಯ್ಯ ಅವರನ್ನು ಸೋಲಿಸಲು ಹಗಲು ರಾತ್ರಿ ಎನ್ನದೆ ಶ್ರಮಿಸಿದರು. ಆದರೇ, ಬೇರೆ ಯಾವ ಕ್ಷೇತ್ರಕ್ಕೂ ಪ್ರಚಾರಕ್ಕೆ ಹೋಗಲಿಲ್ಲ ಏಕೆ? ಸೋಮಣ್ಣ ಅವರಂತಹ ಪ್ರಭಲ ಲಿಂಗಾಯತ ನಾಯಕನನ್ನು ಎರಡು ಕಡೆ ನಿಲ್ಲಿಸಿ ಅವರ ಕತೆ ಮುಗಿಸಿದಿರಿ. ಈ ಬಗ್ಗೆ ಸೋಮಣ್ಣ ಅವರೇ ತಮ್ಮ ಸೋಲಿಗೆ ಬಿಜೆಪಿ ನಾಯಕರೇ ಕಾರಣ ಎಂದು ಹೇಳಿದ್ದಾರೆ. ಬೇರೆ ಕಡೆ ನೀವು ಪ್ರಚಾರಕ್ಕೆ ಹೋಗದ ಕಾರಣ ಅಲ್ಲಿನ ಜನರು ನಿಮಗೆ ಕಲ್ಲು ಹೊಡೆಯುವ ದಿನಗಳು ದೂರವಿಲ್ಲ ಎಂದು ಹೇಳಿದರು.
ಅಭಿವೃದ್ಧಿಗಾಗಿ ನಾನು ಯಾರ ಕಾಲು ಹಿಡಿಯಲೂ ಸಿದ್ದ ಎಂದು ಈಗ ನೀವು ಸಿದ್ದರಾಮಯ್ಯ ಅವರ ಕಾಲು ಹಿಡಿಯುವ ಬಗ್ಗೆ ಮಾತನಾಡುತ್ತೀದ್ದೀರಿ. ಚುನಾವಣೆಗೂ ಮುನ್ನ ನೀವು ಸಿದ್ದರಾಮಯ್ಯ ವಿರುದ್ಧ ಏನೇನು ಮಾತನಾಡಿದ್ದೀರಿ ಎಂಬುದನ್ನು ನೆನಪಿಸಿಕೊಳ್ಳಿ ಎಂದು ಹೇಳಿದ ಲಕ್ಷ್ಮಣ್‌ ಕಾಂಗ್ರೆಸ್‌ ಪಕ್ಷದ ಗ್ಯಾರಂಟಿಗಳ ಜಾರಿಗೆ ಯಾವುದೇ ಅನುಮಾನ ಬೇಡ. ಜನರನ್ನು ಎತ್ತಿಕಟ್ಟುವ ಕೆಲಸ ಬಿಡಿ. ಜನ ನಿಮ್ಮನ್ನು ತ್ಯಜಿಸಿದ್ದಾರೆ ಎಂದರು.
ಬಿಜೆಪಿಯಿಂದ 3.5 ಲಕ್ಷ ಕೋಟಿ ಸಾಲ, 1.5 ಲಕ್ಷ ಕೋಟಿ ಲೂಟಿ :
ಈ ಹಿಂದೆ ಆಡಳಿತದಲ್ಲಿದ್ದ ಬಿಜೆಪಿ ಸರ್ಕಾರ 3.5 ಲಕ್ಷ ಕೋಟಿ ಸಾಲ ಮಾಡಿ ರಾಜ್ಯದ ಖಜಾನೆಯನ್ನು ದಿವಾಳಿ ಮಾಡಿದೆ. ಜತೆಗೆ ಇದರಲ್ಲಿ 1.5 ಲಕ್ಷ ಕೋಟಿ
ಹಣವನ್ನು ಬಿಜೆಪಿ ಸಚಿವರು, ನಾಯಕರು ಲೂಟಿ ಮಾಡಿದ್ದಾರೆ. ಸರ್ಕಾರದ ಹಣ ಜನರ ತೆರಿಗೆ ಹಣ, ನಿಮ್ಮಪ್ಪನ ಮನೆಯ ಹಣ ಎಂದು ಕೊಂಡಿದ್ದೀರಾ? ಪೈಸೆ ಪೈಸೆಗೂ ನಾವು ಲೆಕ್ಕ ಇಟ್ಟು ಖರ್ಚು ಮಾಡುತ್ತೇವೆ. ನಿಮ್ಮ ಹಾಗೆ ಲೂಟಿ ಮಾಡಲ್ಲ ಎಂದರು.
ಸಿದ್ದರಾಮಯ್ಯನ ಹುಂಡಿಯಲ್ಲಿ ನೀವೆ ಗಲಾಟೆ ಮಾಡಿಸಿ ಅದನ್ನು ಕಾಂಗ್ರೆಸ್‌ ಪಕ್ಷಕ್ಕೆ ಕಟ್ಟುವ ಪ್ರಯತ್ನ ಮಾಡಿದಿರಿ. ಈ ಬಗ್ಗೆ ಕೆಲವರಿಗೆ ಮಂಪರು ಪರೀಕ್ಷೆ ಮಾಡಿಸಿ ಸತ್ಯವನ್ನು ಬಯಲಿಗೆಳೆಯುತ್ತೇವೆ. ನಿಮ್ಮ ಕತೆ ಮುಗೀತು. ನೀವು ತಿಪ್ಪರಲಾಗ ಹಾಕಿದರೂ ಮೈಸೂರು-ಕೊಡಗು ಸಂಸದರಾಗುವುದಿಲ್ಲ. ನಿಮ್ಮನ್ನು 3 ಲಕ್ಷ ಮತಗಳ ಅಂತರದಿಂದ ಸೋಲಿಸುತ್ತೇವೆ ಎಂದು ಸವಾಲು ಹಾಕಿದರು.
ಕಾಂಗ್ರೆಸ್‌ ಪಕ್ಷಕ್ಕೆ ಓಟು ಹಾಕಿದವರ್ಯಾರು ಗ್ಯಾರಂಟಿ ತಕ್ಷಣ ಜಾರಿ ಮಾಡಿ ಎಂದು ಕೇಳುತ್ತಿಲ್ಲ. ನಿಮ್ಮಂತಹವರ ಪ್ರಚೋದನೆಯಿಂದ ನಮಗೆ ಓಟು ಹಾಕದವರು ಗ್ಯಾರಂಟಿಗಳ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಲಕ್ಷ್ನಣ್‌ ಕಿಡಿ ಕಾರಿದರು.
ದ್ವೇಷ ರಾಜಕಾರಣ ಮಾಡಿದ್ದು ಬಿಜೆಪಿ :
ಕಾಂಗ್ರೆಸ್‌ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಮಾಜಿ ಸಚಿವ ಅಶ್ವಥ್‌ನಾರಾಯಣ ಹೇಳಿಕೆಗೆ ತಿರುಗೇಟು ನೀಡಿದ ಲಕ್ಷ್ಮಣ್‌, ದ್ವೇಷ ರಾಜಕಾರಣ ಮಾಡಿದ್ದು ಬಿಜೆಪಿ ಸರ್ಕಾರ. ನಮ್ಮ ನಾಯಕರಾದ ಸಿದ್ದರಾಮಯ್ಯ ವಿರುದ್ಧ2019 ರಿಂದ 2023ರ ತನಕ 42 ಪ್ರಕರಣ ದಾಖಲಿಸಿದ್ದೀರಿ. ಇದರಲ್ಲಿ 13 ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದೆ. ಅಲ್ಲದೇ ನನ್ನ ಮೇಲೂ ಹಲವಾರು ಕೇಸ್‌ಗಳನ್ನು ದಾಖಲಿಸಿದ್ದೀರಿ.  ಈಗ ಹೇಳಿ ಯಾರು ದ್ವೇಷ ರಾಕಾರಣ ಮಾಡುತ್ತಿದ್ದಾರೆಂದು ಲಕ್ಷ್ಮಣ್‌ ದೂರಿದರು.
ಅಡ್ಡಂಡ ವಿರುದ್ಧ ರೌಡಿ ಶೀಟ್‌ :
ಶಾಂತವಾಗಿದ್ದ ಮೈಸೂರಿನಲ್ಲಿ ಕೋಮು ಗಲಭೆಗಳಿಗೆ ಪ್ರಚೋದನೆ ನೀಡುವಂತಹ ಕೃತ್ಯದಲ್ಲಿ ಭಾಗಿಯಾಗಿರುವ ಅಡ್ಡಂಡ ಕಾರ್ಯಪ್ಪ ಇನ್ನು ಮುಂದೆ ಬಾಲ ಮುದುರಿಕೊಂಡಿದ್ದರೆ ಒಳ್ಳೆಯದು. ಬಾಲ ಬಿಚ್ಚಿದರೆ ಅಡ್ಡಂಡ ಮತ್ತವನ ಚೇಲಾಗಳ ವಿರುದ್ಧ ರೌಡಿ ಶೀಟ್‌ ತೆರೆಯುವಂತೆ ನಾವು ಪೊಲೀಸರನ್ನು ಒತ್ತಾಯಿಸುತ್ತೇವೆ. ಈ ಹಿಂದೆ ನಮ್ಮ ಕಾರ್ಯಾಚರಣೆ, ಮಾತಿನ ವೈಖರಿ ಬೇರೆ ಇತ್ತು. ಈಗ ಬದಲಾಗಿದೆ ಎಂದು ಲಕ್ಷ್ಮಣ್‌ ಎಚ್ಚರಿಕೆ ನೀಡಿದರು.
ಸಿದ್ದರಾಮಯ್ಯ ವಿರುದ್ಧ ಹೇಳಿಕೆ ನೀಡಿದ್ದ ಅಶ್ವಥ್‌ ನಾರಾಯಣ ವಿರುದ್ಧ ದೇವರಾಜ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿ ಮಂಡ್ಯಕ್ಕೆ ಪ್ರಕರಣ ವರ್ಗಾಯಿಸಲಾಗಿದೆ. ಇನ್ನು 24 ಗಂಟೆಯಲ್ಲಿ ಅಶ್ವಥ್‌ ನಾರಾಯಣ ಅವರ ಬಂಧನ ಆಗದಿದ್ದಲ್ಲಿ ಐಜಿಪಿ ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂದು ಲಕ್ಷ್ಮಣ್‌ ಪೊಲೀಸರಿಗೂ ಎಚ್ಚರಿಕೆ ನೀಡಿದರು.
 
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಿಜೆ ವಿಜಯಕುಮಾರ್‌, ನಗರಾಧ್ಯಕ್ಷ ಮೂರ್ತಿ, ಮುಖಂಡರಾದ ಶಿವಣ್ಣ, ಬಿಎಂ ರಾಮು, ಗಿರೀಶ್‌ ಮುಂತಾದವರು ಇದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು