ಹೊಸ ಇವಿಎಂ ಬಗ್ಗೆ ಅನುಮಾನ, ಎಲ್ಲರ ಸಮ್ಮುಖದಲ್ಲೆ ಡೆಮೋ ನಡೆಯಲಿ : ಎಂ.ಲಕ್ಷ್ಮಣ್

ಮೈಸೂರು : ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಳಸಲು ಮೈಸೂರು ಜಿಲ್ಲೆಗೆ ಹೊಸ ಇವಿಎಂಗಳನ್ನು ತಂದಿದ್ದು, ಈ ಬಗ್ಗೆ ನಮಗೆ ಅನುಮಾನವಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹೇಳಿದರು. 
ಕಾಂಗ್ರೆಸ್ ಕಚೇರಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಿಗೆ 5,635 ಬ್ಯಾಲೆಟ್ ಯೂನಿಟ್ ಹಾಗೂ 3,958 ಕಂಟ್ರೋಲ್ ಯೂನಿಟ್ ಗಳನ್ನು ತರಿಸಲಾಗಿದೆ. ಇವು ಹೊಸ ವಿದ್ಯುನ್ಮಾನ ಮತದಾನದ ಯಂತ್ರಗಳಾಗಿವೆ. ಇದುವರೆಗೂ ಎಲ್ಲೂ ಬಳಕೆಯಾಗದ ಮತಯಂತ್ರಗಳನ್ನು ತರಿಸಿರುವುದು ಅನುಮಾನಕ್ಕೆ ಕಾರಣವಾಗಿದೆ. ಈಗಾಗಲೇ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಲಕ್ಷಾಂತರ ಮತದಾರರ ಹೆಸರನ್ನು ಕೈಬಿಟ್ಟಿರುವುದರಿಂದ ಹೊಸ ಮತ ಯಂತ್ರಗಳ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ. ಇದನ್ನು ಎಲೆಕ್ಟ್ರಾನಿಕ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ತಯಾರಿಸಿದ್ದು, ಮುಂಬೈ ಮೂಲದ ಖಾಸಗಿ ಸಂಸ್ಥೆಗೆ ನಿರ್ವಹಣೆಯ ಗುತ್ತಿಗೆ ನೀಡಿರುವುದು ಕೂಡ ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದರು.
ಚುನಾವಣಾಧಿಕಾರಿಗಳು ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರ ಸಮ್ಮುಖದಲ್ಲಿ ಪ್ರತಿಯೊಂದು ಮತಯಂತ್ರದ ಡೆಮೋ ಮಾಡಬೇಕು. ಆ ಮೂಲಕ ಮತಯಂತ್ರಗಳ ಬಗ್ಗೆ ವ್ಯಕ್ತವಾಗಿರುವ ಅನುಮಾನವನ್ನು ದೂರ ಮಾಡಬೇಕು ಎಂದು ಹೇಳಿದರು.
ಪೊಲೀಸರಿಗೆ ಸಿಗದ ರೌಡಿ ಶೀಟರ್ ಬಿಜೆಪಿಯವರ ಪಕ್ಕದಲ್ಲಿ :
ಬೆಂಗಳೂರು ರೌಡಿ ಶೀಟರ್ ಪಟ್ಟಿಯಲ್ಲಿ ಮೊದಲಿಗನಾಗಿರುವ ಮೋಸ್ಟ್ ವಾಂಟೆಡ್ ಸೈಲೆಂಟ್ ಸುನಿಲ್ ಪೊಲೀಸರಿಗೆ ಸಿಗದಿದ್ದವನು ಬಿಜೆಪಿಯವರಿಗೆ ಸಿಗುತ್ತಾನೆಂಬುದು ಆಶ್ಚರ್ಯಕರವಾಗಿದೆ. ರೌಡಿ ಶೀಟರ್ ಸೈಲೆಂಟ್ ಸುನೀಲ್ ವಿರುದ್ಧ 17 ಗಂಭೀರ ಪ್ರಕರಣಗಳು ದಾಖಲಾಗಿದ್ದವು. ಕೆಲವು ಪ್ರಕರಣಗಳಲ್ಲಿ ಖುಲಾಸೆಯಾಗಿದ್ದರೂ ರೌಡಿಶೀಟರ್ ಪಟ್ಟದಿಂದ ಆತ ಇನ್ನೂ ಮುಕ್ತನಾಗಿಲ್ಲ. ಅಂತಹ ಕ್ರಿಮಿನಲ್ ಹಿನ್ನೆಲೆಯುಳ್ಳ ಸೈಲೆಂಟ್ ಸುನೀಲ್ ಜೊತೆ ಬಿಜೆಪಿ ಸಂಸದರಾದ ಪಿ.ಸಿ ಮೋಹನ್, ತೇಜಸ್ವಿಸೂರ್ಯ, ಶಾಸಕ ಉದಯ್ ಗರುಡಾಚಾರ್ ಸೇರಿದಂತೆ ಬಿಜೆಪಿಯ ಮುಖಂಡರು ವೇದಿಕೆ ಹಂಚಿಕೊಂಡಿದ್ದಾರೆ. ಇದು ಬಿಜೆಪಿಯ ಸಂಸ್ಕøತಿಯಾಗಿದೆ. 47 ಬಿಜೆಪಿ ಶಾಸಕರು ಮತ್ತು 3ಜನ ಸಂಸದರು ಕ್ರಿಮಿನಲ್ ಹಿನ್ನೆಲೆಯುಳ್ಳವರಾಗಿದ್ದಾರೆ.. ಸಚಿವರು, ಸಂಸದರು ಸೇರಿ ಒಟ್ಟು 16 ಮಂದಿ ತಮ್ಮ ವಿರುದ್ಧದ ಸುದ್ದಿಯನ್ನು ಮಾಧ್ಯಮಗಳಲ್ಲಿ ಪ್ರಕಟಿಸದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಅದರಲ್ಲಿ ನಮ್ಮ ಮೈಸೂರಿನ ಹೀರೋ ಸಂಸದ ಪ್ರತಾಪ್ ಸಿಂಹ ಅವರೂ ಸೇರಿದ್ದಾರೆ ಎಂದು  ಲಕ್ಷ್ಮಣ್ ವಾಗ್ದಾಳಿ ನಡೆಸಿದರು.
ಮೇಕೆದಾಟು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಜಾರಿಗೆ ತಂದ ಯೋಜನೆ. ಡಿಪಿಆರ್ ತಯಾರಿಸಿ ಸೆಂಟ್ರಲ್ ವಾಟರ್ ಕಮಿಷನ್ ಗೆ ಅನುಮೋದನೆಗೆ ಸಲ್ಲಿಸಿದ್ದರು. ನಂತರ ಮೇಕೆದಾಟಿಗಾಗಿ ಕಾಂಗ್ರೆಸ್ ವತಿಯಿಂದ ದೊಡ್ಡ ಪಾದಯಾತ್ರೆ ಕೂಡ ನಡೆಯಿತು ಅದು  ಯಶಸ್ವಿಯಾಯಿತು. ಬಳಿಕ ಪಾದಯಾತ್ರೆಯಿಂದ ವಿಚಲಿತರಾಗಿ 2022 ರ ಬಜೆಟ್ ನಲ್ಲಿ ಅಣೆಕಟ್ಟು ನಿರ್ಮಾಣಕ್ಕಾಗಿ 1000 ಕೋಟಿ ಘೋಷಣೆ ಮಾಡಿ ಕೈ ತೊಳೆದುಕೊಂಡಿದ್ದಾರೆ. ಮುಂದಿನ ಅಣೆಕಟ್ಟು ನಿರ್ಮಾಣದ ವಿಚಾರದಲ್ಲಿ ರಾಜ್ಯ ಸರ್ಕಾರ ವಿಳಂಬ ಧೋರಣೆ ಮಾಡುತ್ತಿದೆ. ಇದರ ಜೊತೆ ಈಗಾಗಲೇ ತಮಿಳುನಾಡಿನ ಸರ್ಕಾರ ಅಣೆಕಟ್ಟು ನಿರ್ಮಾಣದ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ತಡೆಯಾಜ್ಞೆ ತರಲು ಹೊರಟಿದೆ. ಹೀಗೆ ವಿಳಂಬ ಮಾಡಿದರೆ ಮೇಕೆದಾಟು ಯೋಜನೆ ಹಳ್ಳ ಹಿಡಿಯುವ ಆತಂಕ ಇದೆ. ಶೀಘ್ರದಲ್ಲೇ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದು ಲಕ್ಷಣ್ ಆಗ್ರಹಿಸಿದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು