ವರದಿ : ನಿಷ್ಕಲ ಎಸ್.ಗೌಡ, ಮೈಸೂರು
ಮೈಸೂರು : ಕನ್ನಡ ನೆಲ, ಜಲ, ಭಾಷೆಯ ಉಳಿವಿಗಾಗಿ ಕನ್ನಡ ಪರ ಸಂಘಟನೆಗಳ ಪಾತ್ರ ದೊಡ್ಡದಾಗಿದ್ದು, ಅವರು ಕನ್ನಡದ ಸೈನಿಕರಾಗಿ ಕೆಲಸ ಮಾಡುತ್ತಿರುವುದರಿಂದಲೇ ಇಂದು ನಮ್ಮ ಕನ್ನಡ ಭಾಷೆ ಉಳಿಯಲು ಸಾಧ್ಯವಾಗಿದೆ ಎಂದು ಕವಿ ಡಾ.ಜಯಪ್ಪ ಹೊನ್ನಾಳಿ ಹೇಳಿದರು.
ನಗರದ ಕೃಷ್ಣಮೂರ್ತಿಪುರಂನಲ್ಲಿರುವ ನಮನ ಕಲಾ ಮಂಟಪದಲ್ಲಿ ಮಂಗಳವಾರ ಕನ್ನಡಾಂಬೆ ರಕ್ಷಣಾ ವೇದಿಕೆ ಏರ್ಪಡಿಸಿದ್ದ ಮೈಸೂರು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡಪರ ಸಂಘಟನೆಗಳ ತ್ಯಾಗ ದೊಡ್ಡದು, ಅವರ ಕನ್ನಡಪರ ನಿರಂತರ ಹೋರಾಟದಿಂದಲೇ ಇಂದು ಕನ್ನಡ ಉಳಿಯಲು ಸಾಧ್ಯವಾಗಿದೆ. ಕನ್ನಡಪರ ಸಂಘಟನೆಗಳ ಎಲ್ಲ ಹೋರಾಟಗಳಿಗೂ ಕನ್ನಡಾಭಿಮಾನಿಗಳು ಬೆಂಬಲ ನೀಡುವ ಮೂಲಕ ಅವರನ್ನು ಬೆಳೆಸಬೇಕು ಎಂದು ಸಲಹೆ ನೀಡಿದರು.
ಕನ್ನಡದ ಕಂದ ಮೂಗೂರು ನಂಜುಂಡಸ್ವಾಮಿ ಮಾತನಾಡಿ, ಕಳೆದ ೪೦ ವರ್ಷಗಳಿಂದ ಕನ್ನಡ ನೆಲ, ಜಲ, ಭಾಷೆಯ ಉಳಿವಿಗಾಗಿ ನಾವು ಹೋರಾಟ ಮಾಡುತ್ತಿದ್ದು, ನನ್ನ ಮೇಲೆ ನೂರಾರು ಕೇಸುಗಳನ್ನು ಹಾಕಲಾಗಿದೆ. ಪ್ರತಿನಿತ್ಯ ಕೋರ್ಟ್ ಕಚೇರಿ ಅಲೆಯುವಂತಾಗಿದೆ. ಇಂದು ಕನ್ನಡದ ಪರ ಹೋರಾಟಗಾರರ ನೋವು ನಲಿವುಗಳನ್ನು ಯಾರೂ ಕೇಳುತ್ತಿಲ್ಲ, ಇದರಿಂದ ಕನ್ನಡಪರ ಹೋರಾಟಗಳಿಗೆ ಯುವ ಸಮೂಹ ಬರುತ್ತಿಲ್ಲ, ಆದಾಗ್ಯೂ ನಾವು ಈ ನಾಡು ಕಟ್ಟುವ ಕೆಲಸ ಮಾಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಕನ್ನಡಾಂಬೆ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಬಿ.ಬಿ.ರಾಜಶೇಖರ್ ಅವರು ನಿರಂತರವಾಗಿ ಒಂದಲ್ಲಾ ಒಂದು ಕನ್ನಡ ಪರ ಕಾರ್ಯಕ್ರಮಗಳನ್ನು ನಡೆಸುತ್ತಾ, ಕನ್ನಡಿಗರ ರಕ್ಷಣೆ ಮಾಡುತ್ತಿದ್ದಾರೆ. ಇತ್ತೀಚೆಗೆ ಅವರು ಕೈಗೆತ್ತಿಕೊಂಡ ಖಾಸಗಿ ಕಾರ್ಖಾನೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕು ಎನ್ನುವ ಹೋರಾಟ ಸಾಕಷ್ಟು ಗಮನ ಸೆಳೆಯಿತು. ಶಾಸಕರಾದ ಜಿ.ಟಿ.ದೇವೇಗೌಡರು ಮತ್ತು ಮಾಜಿ ಸಂಸದರಾದ ಪ್ರತಾಪ್ ಸಿಂಹ ಅವರು ಸಹ ರಾಜಶೇಖರ್ ಅವರ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದು, ಹೋರಾಟಕ್ಕೆ ಸಾಕಷ್ಟು ಶಕ್ತಿ ನೀಡಿತ್ತು, ನಾವು ಸದಾಕಾಲ ಕನ್ನಡಾಂಬೆ ರಕ್ಷಣಾ ವೇದಿಕೆಯ ಎಲ್ಲ ಹೋರಾಟಗಳಿಗೂ ಬೆಂಬಲ ನೀಡುತ್ತೇವೆ ಎಂದರು.
ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷರಾದ ಎಂ.ಚಂದ್ರಶೇಖರ್ ಮಾತನಾಡಿ, ಕನ್ನಡಪರ ಹೋರಾಟ ಪ್ರಾರಂಭವಾಗಿದ್ದೇ ಮೈಸೂರಿನಲ್ಲಿ, ಇಂತಹ ಸಾಂಸ್ಕೃತಿಕ ನೆಲದಲ್ಲಿ ಹಲವಾರು ಮಹನೀಯರು ಕನ್ನಡವನ್ನು ಕಟ್ಟಿ ಬೆಳೆಸಿದ್ದಾರೆ. ಇಂದಿನ ದಿನಗಳಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯಗಳ ವಿರುದ್ಧ ಕನ್ನಡಾಂಬೆ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಬಿ.ಬಿ.ರಾಜಶೇಖರ್ ಅವರ ಹೋರಾಟ ದೊಡ್ಡದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಇತ್ತೀಚೆಗೆ ಮೈಸೂರು ಜಿಲ್ಲಾಡಳಿತದಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕರವೇ ರಾಜ್ಯ ಖಜಾಂಚಿ ನಂಜುಂಡ ಮತ್ತು ಕರವೇ ಜಿಲ್ಲಾ ಗೌರವ ಕಾರ್ಯದರ್ಶಿ ಸಿಂಧುವಳ್ಳಿ ಶಿವಕುಮಾರ್ ಅವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕರವೇ ರಾಜ್ಯಾಧ್ಯಕ್ಷ ಬಿ.ಬಿ.ರಾಜಶೇಖರ್, ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷರಾದ ಎಂ.ಚಂದ್ರಶೇಖರ್, ಹೊನ್ನೇಗೌಡ, ಶಿವಣ್ಣ, ಶಿವಕುಮಾರ್, ಕಿರಣ, ಹರೀಶ್, ವತ್ಸಲ, ಸೌಭಾಗ್ಯ, ಲಕ್ಷ್ಮಿ, ಭಾಗ್ಯಮ್ಮ, ಲೋಕೇಶ್, ವಿಷ್ಣು, ಇನ್ನಿತರರು ಇದ್ದರು.
ಇಂದಿನ ದಿನಗಳಲ್ಲಿ ಹೋರಾಟಗಾರರ ಸಂಖ್ಯೆ ಕಡಿಮೆಯಾಗಿದೆ. ಸಂಘಟನೆಗೆ ಬರುವವರು ಏನಾದ್ರೂ ಸಿಗುತ್ತಾ ಎಂಬ ನಿರೀಕ್ಷೆಯಲ್ಲಿ ಬರುತ್ತಾರೆ. ಆದರೇ, ಇಲ್ಲಿ ಕನ್ನಡದ ಸೇವೆಗೆ ಮಾತ್ರ ಅವಕಾಶ ಎಂಬುದನ್ನು ನೋಡಿ ಹೋರಾಟದಿಂದ ದೂರ ಸರಿಯುತ್ತಾರೆ. ಇಂತಹವರ ನಡುವೆಯೂ ರಾಜ್ಯಾದ್ಯಂತ ಸಾವಿರಾರು ಯುವಕರು ಕನ್ನಡಾಂಬೆ ರಕ್ಷಣಾ ವೇದಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಕನ್ನಡಿಗರಿಗೆ ಉತ್ತಮ ಸೇವೆ ಸಿಗಬೇಕು, ಕಾರ್ಖಾನೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ದೊರಕಬೇಕು, ಕನ್ನಡ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬುದರ ಬಗ್ಗೆ ನಾವು ಹೋರಾಟ ಮಾಡಲಿದ್ದೇವೆ.
ಬಿ.ಬಿ.ರಾಜಶೇಖರ್, ರಾಜ್ಯಾಧ್ಯಕ್ಷರು.


