ವಸ್ತು ಪ್ರದರ್ಶನದ ಕಾಮಗಾರಿಗಳಲ್ಲಿ ಭ್ರಷ್ಟಾಚಾರ : ಪ್ರಾಧಿಕಾರದ ಅಧ್ಯಕ್ಷ ಅಯ್ಯೂಬ್ ಖಾನ್ ವಿರುದ್ಧ ಮಾಜಿ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ ಆರೋಪ


 ವರದಿ: ನಿಷ್ಕಲ ಎಸ್.ಗೌಡ, ಮೈಸೂರು

ಮೈಸೂರು : ಮೈಸೂರು ದಸರಾ ಕಾರ್ಯಕ್ರಮದ ಪ್ರಮುಖ ಕೇಂದ್ರಬಿಂದುವಾದ ವಸ್ತು ಪ್ರದರ್ಶನಕ್ಕೆ ರಾಜ್ಯ ಸರ್ಕಾರ ಭಾರಿ ಪ್ರಮಾಣದಲ್ಲಿ ಬಿಡುಗಡೆ ಮಾಡಿರುವ ಅನುದಾನ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ, ಅಧ್ಯಕ್ಷರಾದ ಅಯ್ಯೂಬ್ ಖಾನ್ ಅವರು ಭ್ರಷ್ಟಾಚಾರದಲ್ಲಿ ಪಾಲ್ಗೊಂಡಿದ್ದಾರೆ ಎಂದು ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಮಿರ್ಲೆ ಶ್ರೀನಿವಾಸಗೌಡ ಆರೋಪಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಅಯ್ಯೂಬ್ ಖಾನ್ ಅವರು ಒಂದು ಕಡೆ ಸಿದ್ದರಾಮಯ್ಯ ಅವರನ್ನು ಓಲೈಸುವುದು ಮತ್ತೊಂದು ಕಡೆ ಮುಸ್ಲಿಂ ಸಮುದಾಯವನ್ನು ಓಲೈಕೆ ಮಾಡುತ್ತಿದ್ದಾರೆ. ವಿದ್ಯುತ್ ಸೇರಿದಂತೆ ಅನೇಕ ಕಾಮಗಾರಿಗಳನ್ನು ತಮ್ಮ ಬೆಂಬಲಿಗರಿಗೆ ನೀಡುವ ಮೂಲಕ ಭ್ರಷ್ಟಾಚಾರ ನಡೆಸುತ್ತಿದ್ದಾರೆ. ವಸ್ತು ಪ್ರದರ್ಶನದಲ್ಲಿ ಕೆಲವೆಡೆ ಮಾತ್ರ ರಸ್ತೆ ಅಭಿವೃದ್ಧಿ ಮಾಡಿದ್ದು, ಉಳಿದ ಕಡೆ ಕಾಮಗಾರಿ ನಡೆಸಿಲ್ಲ, ಶೌಚಾಲಯಕ್ಕೂ ಹಣ ನಿಗದಿ ಮಾಡಲಾಗಿದೆ. ಶುದ್ಧವಾದ ಕುಡಿಯುವ ನೀರನ್ನು ಉಚಿತವಾಗಿ ಒದಗಿಸಿಲ್ಲ, ವಸ್ತು ಪ್ರದರ್ಶನ ಪ್ರಾರಂಭವಾದ ಬಳಿಕ ರಸ್ತೆ ಕಾಮಗಾರಿ ನಡೆಸುವ ಅವಶ್ಯಕತೆ ಇರಲಿಲ್ಲ, ಅಲ್ಲದೇ ವಸ್ತು ಪ್ರದರ್ಶನದಲ್ಲೂ ಮುಸ್ಲೀಮರನ್ನೂ ವೈಭವೀಕರಣ ಮಾಡಲಾಗುತ್ತಿದೆ. ಸಿದ್ದರಾಮಯ್ಯ ದ್ವಾರ, ಅಜೀಜ್ ಸೇಠ್ ಫೌಂಟೇನ್, ಪೈಲ್ವಾನ್ ಮಹದೇವಪ್ಪ ಅಖಾಡ ಎಂದು ಹೆಸರಿಟ್ಟೀದ್ದರೀ.. ಕಾಂಗ್ರೆಸ್ ನಾಯಕ ಹೆಸರನ್ನು ಇಡುವ ಬದಲು ಇಡೀ ವಸ್ತು ಪ್ರದರ್ಶನಕ್ಕೆ ಕಾಂಗ್ರೆಸ್ ವಸ್ತು ಪ್ರದರ್ಶನ ಎಂದು ಹೆಸರಿಟ್ಟುಬಿಡಿ ಎಂದು ವ್ಯಂಗ್ಯವಾಡಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಕೆ.ಎನ್.ಸುಬ್ಬಣ್ಣ, ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಕಾರ್ಯದರ್ಶಿ ಪ್ರಭಾಕರ್ ಜೈನ್, ಜಿಲ್ಲಾ ವಕ್ತಾರ ದಯಾನಂದ ಪಟೇಲ್ ಇತರರು ಇದ್ದರು.