ಧರ್ಮಗುರು ಅಕ್ಮಲ್ ಪಾಷ ಕೊಲೆ ಖಂಡಿಸಿ ಎಸ್‌ಡಿಪಿಐನಿಂದ ಬೃಹತ್ ಪ್ರತಿಭಟನೆ

'ಮೈಸೂರಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ’
ಮೈಸೂರು : ಮೈಸೂರು ನಗರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಜನನಿಬಿಡ ಪ್ರದೇಶದಲ್ಲಿ ಒಬ್ಬ ಪ್ರಖ್ಯಾತ ಧರ್ಮಗುರು ಹತ್ಯೆಯಾಗಿರುವುದು ಈ ಸರ್ಕಾರಕ್ಕೆ, ಪೊಲೀಸರಿಗೆ, ಮುಖ್ಯಮಂತ್ರಿ ಮತ್ತು ಗೃಹಸಚಿವರಿಗೆ ನಾಚಿಕೆಗೆಡಿನ ವಿಷಯ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಕಿಡಿ ಕಾರಿದರು.



ಭಾನುವಾರ ಸಂಜೆ ಶಾಂತಿನಗರ ಬಡಾವಣೆಯ ಮಹದೇವಪುರ ಮುಖ್ಯರಸ್ತೆಯಲ್ಲಿನ ಮದನಿ ಮಸೀದಿ ಎದುರು ಧರ್ಮಗುರು ಮೊಹಮ್ಮದ್ ಅಕ್ಮಲ್ ಅವರ ಕೊಲೆಯನ್ನು ಖಂಡಿಸಿ ಎಸ್‌ಡಿಪಿಐ ಕರೆ ನೀಡಿದ್ದ ಪ್ರತಿಭಟನಾ ರ‍್ಯಾಲಿಯ ನೇತೃತ್ವ ವಹಿಸಿ ಅವರು ಮಾತನಾಡಿದರು.
ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ತಾರತಮ್ಯ ಮಾಡುತ್ತಿದ್ದಾರೆ. ನೀವು ಅನೇಕ ಪ್ರಕರಣಗಳಲ್ಲಿ ಅಮಾಯಕರನ್ನು ಬಂಧಿಸಿ ಅವರ ವಿರುದ್ಧ ಕೇಸು ದಾಖಲಿಸಿದ್ದೀರಿ. ಆದರೇ, ಸದರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ಬಂಧಿಸಬೇಕು. ಇದು ಸಾಂಕೇತಿಕ ಪ್ರತಿಭಟನೆ ಆರೋಪಿಗಳ ಬಂಧನ ಆಗದಿದ್ದರೆ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲಾಗುವುದು ಎಂದು ಮಜೀದ್ ಎಚ್ಚರಿಕೆ ನೀಡಿದರು.

ಎಸ್‌ಡಿಪಿಐ ಮುಖಂಡ ಅಫ್ಸರ್ ಕೊಡ್ಲಿಪೇಟೆ ಮಾತನಾಡಿ, ಧರ್ಮಗುರು ಅಕ್ಮಲ್ ಪಾಷ ಅವರ ಕೊಲೆ ಆರೋಪಿಗಳನ್ನು ರಾಜಕಾರಣಿಗಳು ರಕ್ಷಣೆ ಮಾಡುತ್ತಿದ್ದಾರೆ. 
ಈ ಹಿಂದೆ ಮೈಸೂರಿನಲ್ಲಿ ನಿವೃತ್ತ ಐಬಿ ಅಧಿಕಾರಿ ಕೊಲೆ ಪ್ರಕರಣವನ್ನು ಪೊಲೀಸರು ಒಂದೇ ದಿನದಲ್ಲಿ ಬೇಧಿಸಿ ಆರೋಪಿಗಳನ್ನು ಬಂಧಿಸಿದ್ದರು. ಆದರೇ, ಅಕ್ಮಲ್ ಪಾಷ ಅವರನ್ನು ಕೊಲೆ ಮಾಡಿದ ಆರೋಪಿಗಳು ಮತ್ತು ಅವರಿಗೆ ಕುಮ್ಮಕ್ಕು ನೀಡಿದ ವ್ಯಕ್ತಿಗಳ ಬಗ್ಗೆ ಸಾಕಷ್ಟು ಮಾಹಿತಿ ಇದ್ದರೂ ಪೊಲೀಸರು ಆರೋಪಿಗಳನ್ನು ಬಂಧಿಸುತ್ತಿಲ್ಲ. ಏನು ಕಾರಣ? 
ಯಾರು ಅವರನ್ನು ರಕ್ಷಿಸುತ್ತಿದ್ದಾರೆ? ಪೊಲೀಸರ ಕೈ ಕಟ್ಟಿಹಾಕಿರುವ ರಾಜಕಾರಣಿಗಳ ಹೆಸರನ್ನಾದರೂ ಹೇಳಿ ನಾವು ಸರ್ಕಾರವನ್ನು ಪ್ರಶ್ನಿಸುತ್ತೇವೆ ಎಂದು ಒತ್ತಾಯಿಸಿದರು.
ಯಾವುದೋ ಪುಡಿ ರೌಡಿಗಳು ಸತ್ತರೆ ಮುಖ್ಯಮಂತ್ರಿಗಳು ಅವರ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿ ಪರಿಹಾರ ನೀಡುತ್ತಾರೆ. ಆದರೇ, ಮೈಸೂರಿನಲ್ಲಿ ಕೊಲೆಯಾದವರು ಅನ್ಯಾಯಗಳ ವಿರುದ್ಧ ದನಿ ಎತ್ತಿದ ಮುಸ್ಲಿಂ ಧರ್ಮಗುರುಗಳು, ಮುಖ್ಯಮಂತ್ರಿಗಳು ಅವರ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಬಹುದಿತ್ತು. ಆದರೇ, ಆ ಕೆಲಸ ಮೈಸೂರಿನವರೇ ಆದ ಮುಖ್ಯಮಂತ್ರಿಗಳು ಮಾಡಲಿಲ್ಲ. ಕನಿಷ್ಠ ಅವರ ಕುಟುಂಬದವರು ತಮ್ಮನ್ನು ಭೇಟಿ ಮಾಡುವ ಇಚ್ಛೆ ವ್ಯಕ್ತಪಡಿಸದರೂ ಅದಕ್ಕೆ ಅವಕಾಶ ನೀಡಲಿಲ್ಲ. ಕೂಡಲೇ ಮುಖ್ಯಮಂತ್ರಿಗಳು ಮೃತರ ಕುಟುಂಬದವರಿಗೆ ತಮ್ಮನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಬೇಕು ಮತ್ತು ಅವರ ಕುಟುಂಬಕ್ಕೆ ಸರ್ಕಾರದಿಂದ ೫೦ ಲಕ್ಷ ರೂ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.  
ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯ ಅಕ್ರಮಗಳ ವಿರುದ್ಧ ದನಿ ಎತ್ತಿದ ಮತ್ತು ಸತ್ಯ ಹೇಳಿದ ಕಾರಣಕ್ಕಾಗಿ ಅಕ್ಮಲ್ ಪಾಷ ಅವರನ್ನು ತಲ್ವಾರ್ ಏಟಿನಿಂದ ಹೊಡೆದು ಸಾಯಿಸಿದ್ದಾರೆ. ನೆನಪಿಡಿ ಕೊಲೆಗಡುಕರೇ, ಅಕ್ಮಲ್ ಪಾಷ ಅವರ ತಲೆಯಿಂದ ಚಿಮ್ಮಿದ ರಕ್ತದಿಂದ ಸತ್ಯ ಹೇಳುವ ಸಾವಿರಾರು ಜನ ಅಕ್ಮಲ್ ಪಾಷ ಹುಟ್ಟುತ್ತಾರೆ ಎಂದು ಅಫ್ಸರ್ ಕೊಡ್ಲಿಪೇಟೆ ಕಿಡಿ ಕಾರಿದರು.

ಎಸ್‌ಡಿಪಿಐ ಜಿಲ್ಲಾ ಅಧ್ಯಕ್ಷ ರಫತ್ ಖಾನ್ ಮಾತನಾಡಿ, ಮೈಸೂರಿನಲ್ಲಿ ಮುಸ್ಲಿಂ ಸಮುದಾಯದ ಒಬ್ಬ ಧರ್ಮಗುರುವನ್ನು ರಾಜಾರೋಷವಾಗಿ ಕೊಲೆ ಮಾಡುವಷ್ಟು ಧೈರ್ಯ ತೋರುವುದು ಇಲ್ಲಿನ ಕಾನೂನು ಸುವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಬಿಜೆಪಿ ವಿರುದ್ಧ ಮುಸ್ಲಿಂ ಸಮುದಾಯವನ್ನು ಎತ್ತಿಕಟ್ಟಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿಸಿಕೊಂಡು ಗೆಲವು ಸಾಧಿಸಿದ ಜನಪ್ರತಿನಿಧಿಗಳೇ ಅಮಾಯಕರನ್ನು ಕೊಲೆ ಮಾಡಿಸುತ್ತಿದ್ದಾರೆ ಎಂದು ಕಿಡಿ ಕಾರಿದರು.

ಇದು ಕೊಲೆಗಡುಗರ ತಪ್ಪಿಗಿಂತಲೂ ಅವರಿಗೆ ಕುಮ್ಮಕ್ಕು ನೀಡಿದವರೇ ಪ್ರಮುಖ ಕೊಲೆಗಡುಕರಾಗಿದ್ದಾರೆ. ಪೊಲೀಸರು ಕೂಡಲೇ ಇವರನ್ನು ಬಂಧಿಸಬೇಕೆಂದು ರಫತ್ ಖಾನ್ ಒತ್ತಾಯಿಸಿದರು. 
ಇದೇ ಸಂದರ್ಭದಲ್ಲಿ ಪೊಲೀಸರ ನಿರ್ಲಕ್ಷ್ಯದ ವಿರುದ್ಧ ಮತ್ತು ಮಾಜಿ ಪಾಲಿಕೆ ಸದಸ್ಯ ಬಶೀರ್ ಹಾಗೂ ಕೆಎಂಡಿಸಿ ರಾಜ್ಯಾದ್ಯಕ್ಷ ಬಿ.ಕೆ.ಅಲ್ತಾಫ್ ಖಾನ್ ವಿರುದ್ಧ ಘೋಷಣೆ ಕೂಗಲಾಯಿತು.
ಪ್ರತಿಭಟನೆಯಲ್ಲಿ ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ಮುಖಂಡರಾದ ಅಮ್ಜದ್ ಖಾನ್, ನೂರುದ್ದೀನ್ ಮೌಲಾನ, ತಬ್ರೇಝ್ ಸೇಠ್ ಮುಂತಾದವರು ಇದ್ದರು.


ಪ್ರತಿ ಶುಕ್ರವಾರ ಮಸೀದಿಗಳಲ್ಲಿ ಮುಸ್ಲಿಂ ಸಮುದಾಯದ ಯುವಕರು ಯಾವುದೇ ಕೆಟ್ಟ ದಾರಿಯನ್ನು ಹಿಡಿಯದೆ, ಒಳ್ಳೆಯ ದಾರಿಯಲ್ಲಿ ನಡೆಯಬೇಕು. ಇಸ್ಲಾಂ ಧರ್ಮದ ಅನುಸಾರ ಬದುಕಬೇಕು ಎಂದು ನಮ್ಮ ಧರ್ಮಗುರುಗಳು ವಿಶೇಷ ಪ್ರವಚನಗಳನ್ನು ನೀಡುತ್ತಾರೆ. ಅದರಂತೆ ಮೃತ ಧರ್ಮಗುರು ಮೊಹಮ್ಮದ್ ಅಕ್ಮಲ್ ಅವರು ಯಾವುದೇ ತಪ್ಪನ್ನು ಕಂಡರೆ ನೇರವಾಗಿ ಖಂಡಿಸುತ್ತಿದ್ದರು. ಆದರೇ, ಅಂತಹ ನೇರ ನಿಷ್ಠಾವಂತ ಪ್ರಾಮಾಣಿಕ ಗುರುಗಳನ್ನು ಕೊಲೆ ಮಾಡಿದ್ದು ದುರ್ದೈವ.
ಅಬ್ದುಲ್ ಮಜೀದ್, ಎಸ್‌ಡಿಪಿಐ ರಾಜ್ಯಾಧ್ಯಕ್ಷರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು