ಸಿದ್ದರಾಮಯ್ಯ ನುಡಿದಂತೆ ನಡೆದಿಲ್ಲ : ಅಬ್ದುಲ್ ಮಜೀದ್ ಆರೋಪ

ಕಾಂತರಾಜು ವರದಿ ಜಾರಿಗಾಗಿ ಎಸ್‌ಡಿಪಿಐ ಪಕ್ಷದಿಂದ ಮೈಸೂರಿನಲ್ಲಿ ಬೃಹತ್‌ ಪ್ರತಿಭಟನೆ

ಮೈಸೂರು : ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್‌ ಮುಸ್ಲಿಂ ಸಮುದಾಯಕ್ಕೆ ನೀಡಿದ್ದ ಯಾವುದೇ ಭರವಸೆಗಳನ್ನು ಈಡೇರಿಸದೆ ವಂಚನೆ ಮಾಡಿದ್ದಾರೆ. ಇಬ್ಬರೂ ನುಡಿದಂತೆ ನಡೆದಿಲ್ಲ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್‌ ಮಜೀದ್‌ ಆರೋಪಿಸಿದರು.
ಕಾಂತರಾಜು ವರದಿ ಜಾರಿ ಮಾಡಬೇಕು. 2ಬಿ ಮೀಸಲಾತಿಯನ್ನು ಶೇ. 8ಕ್ಕೆ ಹೆಚ್ಚಿಸಬೇಕೆಂದು ಒತ್ತಾಯಿಸಿ ನಗರದ ಎಫ್‌ಟಿಎಸ್‌ ವೃತ್ತದ ಅಂಬೇಡ್ಕರ್‌ ಪ್ರತಿಮೆ ಎದುರು ಎಸ್‌ಡಿಪಿಐ ನಡೆಸಿದ ಬೃಹತ್‌ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬರಲು ಮುಸ್ಲಿಂ ಮತ್ತು ದಲಿತ ಸಮುದಾಯ ಪ್ರಮುಖ ಕಾರಣವಾಗಿದೆ. ಚುನಾವಣೆ ವೇಳೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ ಕಾಂಗ್ರೆಸ್‌ ಪಕ್ಷ ಆಡಳಿತಕ್ಕೆ ಬಂದ ಮೊದಲ ಕ್ಯಾಬಿನೆಟ್‌ನಲ್ಲೇ ಬಿಜೆಪಿ ರದ್ದುಪಡಿಸಿದ್ದ 2ಬಿ ಮೀಸಲಾತಿ ಪುನರ್‌ ಪ್ರತಿಷ್ಠಾಪನೆ ಮಾಡುವುದಾಗಿ ಹೇಳಿದ್ದರು. ಈಗ 10 ಕ್ಯಾಬಿನೆಟ್‌ಮೀಟಿಂಗ್‌ ಆದರೂ ಅದರ ಬಗ್ಗೆ ಪ್ರಸ್ತಾವನೆಯನ್ನೂ ಮಾಡಿಲ್ಲ. ಕೇಳಿದರೆ ಪ್ರಕರಣ ನ್ಯಾಯಾಲಯದಲ್ಲಿದೆ ಎನ್ನುತ್ತೀರಿ. ಆದರೇ, ಮತಾಂತರ ನಿಷೇದ ಕಾಯ್ದೆಪ್ರಕರಣವೂ ನ್ಯಾಯಾಲಯದಲ್ಲಿತ್ತು.ಅದನ್ನು ಸಂಪುಟ ಸಭೆಗೆ ತಂದು ಕಾಯ್ದೆ ರದ್ದು ಮಾಡಿದ್ದು ಹೇಗೆ? ಇದನ್ನೂ ಹಾಗೆಯೇ ಮಾಡಿ ಸುಖಾ ಸುಮ್ಮನೆ ಮುಸ್ಲಿಂ ಸಮುದಾಯವನ್ನು ವಂಚಿಸಬೇಡಿ ಎಂದು ಹರಿಹಾಯ್ದರು.

ಕಾಂಗ್ರೆಸ್‌ ಸರ್ಕಾರದ ಇಬ್ಬರು ಮುಸ್ಲಿಂ ಮಂತ್ರಿಗಳು 7 ಜನ ಶಾಸಕರು ನಾಮರ್ಧರು : ಮಜೀದ್‌ ವ್ಯಂಗ್ಯ

ಅಲ್ಪಸಂಖ್ಯಾತ ಮುಸ್ಲೀಂ ಸಮುದಾಯಕ್ಕೆ 30 ವರ್ಷಗಳಿಂದ ನೀಡಲಾಗಿದ್ದ 2ಬಿ ಮೀಸಲಾತಿ ಪುನರ್‌ ಪ್ರತಿಷ್ಠಾಪಿಸುವಂತೆ ಕಾಂಗ್ರೆಸ್‌ ಸರ್ಕಾರದಲ್ಲಿರುವ ಇಬ್ಬರು ಮುಸ್ಲಿಂ ಮಂತ್ರಿಗಳು ಸೇರಿದಂತೆ 9 ಶಾಸಕರಿಗೆ ಕೇಳುವ ಧೈರ್ಯ ಇಲ್ಲದಿರುವುದು ನಾಚಿಕೆಗೇಡು. ಅವರೆಲ್ಲರೂ ನಾಮರ್ಧರು ಎಂದುಕಿಡಿ ಕಾರಿದರು.
ಕಳೆದ ಬಾರಿ ಕಾಂಗ್ರೆಸ್‌ ಸರ್ಕಾರ ಆಡಳಿತದಲ್ಲಿದ್ದಾಗ ಕಾಂತರಾಜು ವರದಿ ಅಂಗೀಕರಿಸದೆ, ಸಮ್ಮಿಶ್ರ ಸರ್ಕಾರದ ಸಿಎಂ ಕುಮಾರಸ್ವಾಮಿ ವರದಿ ಅಂಗೀಕರಿಸಲಿಲ್ಲ ಎಂದು ಆರೋಪಿಸುವ ಸಿಎಂ, ಆ ವೇಳೆ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದರು. ಯಾವ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಮಾಡಲಾಗಿತ್ತು ಎಂದು ಬಹಿರಂಗ ಮಾಡಲಿ. ಹೆಚ್‌ಡಿಕೆ ಸಿದ್ದರಾಮಯ್ಯ ಮೇಲೆ, ಸಿದ್ದರಾಮಯ್ಯ ಹೆಚ್‌ಡಿಕೆ ಮೇಲೆ ಆರೋಪ ಮಾಡುತ್ತಾ ಮುಸ್ಲಿಂ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ. ನಿಮಗೆ ದಮ್ಮು, ತಾಕತ್ತು ಇದ್ದರೆ ಕಾಂತರಾಜು ವರದಿ ಅಂಗೀಕರಿಸಿ ಅದಕ್ಕೆ ಅನುಗುಣವಾಗಿ ದಲಿತರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ಸಮುದಾಯಕ್ಕೆ ಸೂಕ್ತ ಸೌಲಭ್ಯ ಕಲ್ಪಿಸಿ ಎಂದು ಅಬ್ದುಲ್‌ ಮಜೀದ್‌ ಸವಾಲು ಹಾಕಿದರು.

ಸಿದ್ದು, ಡಿಕೆಶಿಗೆ ಬಿಜೆಪಿ ಐಟಿ ಸೆಲ್‌ ಭಯವಿದೆ

ವೇಳೆ ಕಾಂತರಾಜು ವರದಿ ಅಂಗೀಕರಿಸಿ ಸಮುದಾಯಗಳಿಗೆ ಅನುಕೂಲ ಮಾಡಿದ್ದಲ್ಲಿ ಮುಸ್ಲಿಂ ತುಷ್ಠೀಕರಣ ಎಂದು ಬಿಜೆಪಿ ಐಟಿ ಸೆಲ್‌ ಗುಲ್ಲೆಬ್ಬಿಸುತ್ತದೆ ಎಂಬ ಭಯ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ ಅವರಿಗೆ ಕಾಡುತ್ತಿದೆ. ಆದರೇ, ಜನ ಜಾಗೃತರಾಗಿದ್ದಾರೆ. ಕಳೆದ ಬಾರಿ ಕೋಮುವಾದಿ ಸರ್ಕಾರದಿಂದ ತೀವ್ರ ಅನ್ಯಾಯಕ್ಕೆಒಳಗಾಗಿದ್ದ ಮುಸ್ಲಿಂ ಮತ್ತು ದಲಿತ ಸಮುದಾಯ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಿತ್ತು. ಮುಂದಿನ ಚುನಾವಣೆಯಲ್ಲಿ ನೀವು ಈ ಸಮುದಾಯಗಳ ಆಶೋತ್ತರಗಳನ್ನು ಈಡೇರಿಸದಿದ್ದಲ್ಲಿ ನಿಮಗೆ ತಕ್ಕ ಪಾಠ ಕಲಿಸುತ್ತಾರೆ ಎಂಬುದು ನೆನಪಿರಲಿ ಎಂದು ಎಚ್ಚರಿಕೆ ನೀಡಿದರು.


ಬಿಹಾರದಲ್ಲಿ ಜಾತಿ ಗಣತಿ ವರದಿ ಪ್ರಕಟವಾಗಿದೆ. ಕಾಂಗ್ರೆಸ್‌ ಕೂಡ ತಾನು ಆಡಳಿತದಲ್ಲಿರುವ ರಾಜ್ಯಗಳಲ್ಲಿ ಜಾತಿ ಗಣತಿ ಮಾಡಿಸುವುದಾಗಿ ಹೇಳಿದೆ. ಆದರೇ ರಾಜ್ಯದಲ್ಲಿ ಈಗಾಗಲೇ ವರದಿ ತಯಾರಾಗಿದೆ. ಇದನ್ನು ಅಂಗೀಕರಿಸಿ ತುಳಿತಕ್ಕೆ ಒಳಗಾದ ಸಮುದಾಯದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಬೇಕು. ಅಲ್ಲಿಯ ತನಕವೂ ಎಸ್‌ಡಿಪಿಐ ರಾಜ್ಯವ್ಯಾಪಿ ಜನ ಜಾಗೃತಿ ಮೂಡಿಸಿ ಹೋರಾಟ ನಡೆಸುತ್ತದೆ ಎಂದು ಮಜೀದ್‌ ಹೇಳಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ದೇವನೂರು ಪುಟ್ಟನಂಜಯ್ಯ, ಹರಿಹರ ಆನಂದಸ್ವಾಮಿ, ಮೌಲಾನ ನೂರುದ್ದೀನ್‌, ರಫತ್‌ ಖಾನ್‌,ತನ್ವೀರ್‌ ಪಾಷ, ಅಲ್ತಾಫ್‌ ಅಹಮದ್‌, ಸ್ವಾಮಿ ಮುಂತಾದವರು ಇದ್ದರು.

ಮುಸ್ಲಿಂ ಬೆಂಬಲದಿಂದ ಗೆದ್ದ‌ ಶ್ಯಾಮನೂರು
ದಾವಣಗೆರೆ ಶಾಸಕ ಶಾಮನೂರು ಶಿವಶಂಕರಪ್ಪ ಗೆಲ್ಲಲು 51 ಸಾವಿರ ಮುಸ್ಲಿಂ ಮತಗಳು ಕಾರಣ, ಆದರೇ ಅವರೀಗ ತಮ್ಮ ಸಮುದಾಯದ ಅಧಿಕಾರಿಗಳಿಗೆ ಆಯಕಟ್ಟಿನ ಜಾಗ ಸಿಕ್ಕಿಲ್ಲ ಎಂದು ಹೇಳುತ್ತಿದ್ದಾರೆ. ತಮ್ಮನ್ನು ಗೆಲ್ಲಿಸಿದ ಮುಸ್ಲಿಂ ಮತ್ತು ದಲಿತ ಸಮುದಾಯದ ಬಗ್ಗೆ ಅವರು ಚಕಾರೆ ಎತ್ತಿಲ್ಲ.ಸಮುದಾಯದ ಜನರು ಇದನ್ನು ಅರ್ಥ ಮಾಡಿಕೊಂಡು ಮುಂದಿನ ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸಬೇಕು.
ಅಬ್ದುಲ್‌ ಮಜೀದ್‌.ರಾಜ್ಯಾಧ್ಯಕ್ಷರು.ಎಸ್‌ಡಿಪಿಐ.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು