ಐಸೊಲೇಷನ್ ವಾರ್ಡ್ ಕಟ್ಟಡ ಕಾಮಗಾರಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭೂಮಿಪೂಜೆ

ಪಾಂಡವಪುರ : ಇಲ್ಲಿನ ಉಪ ವಿಭಾಗೀಯ ಸರ್ಕಾರಿ ಆಸ್ಪತ್ರೆಯಲ್ಲಿ ೩೦ ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನೂತನ ಐಸೋಲೇಷನ್‌ ವಾರ್ಡ್‌ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಬುಧವಾರ ಭೂಮಿಪೂಜೆ ಸಲ್ಲಿಸಿದರು.
ಬಳಿಕ ಅವರು ಮಾತನಾಡಿ, ಗ್ರಾಮೀಣ ಪ್ರದೇಶದ ರೈತಾಪಿ ಜನರು ಈ ಆಸ್ಪತ್ರೆಯನ್ನೆ ನಂಬಿದ್ದಾರೆ. ಇದಕ್ಕೆ ಅಗತ್ಯವಾದ ಎಲ್ಲಾ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುತ್ತಿದ್ದೇವೆ. ಸಣ್ಣ ಪುಟ್ಟ ಚಿಕಿತ್ಸೆಗಾಗಿ ರೋಗಿಗಳನ್ನು ಮೈಸೂರಿಗೆ ಕಳಿಸುತ್ತಿದ್ದಾರೆ ಎಂಬ ಆಪಾದನೆ ನಿರಂತರವಾಗಿ ಕೇಳಿ ಬರುತ್ತದೆ. ಇದಕ್ಕಾಗಿ ಆ ಸ್ಪತ್ರೆಗೆ ದಾಖಲಾಗುವ ರೋಗಿಗಳು ಮತ್ತು ಇಲ್ಲಿಂದ ಮೈಸೂರು ಮತ್ತಿತರ ಕಡೆ ಹೋಗುವ ರೋಗಿಗಳ ಮಾಹಿತಿ ಕಲೆ ಹಾಕುತ್ತಿದ್ದೇವೆ. ಅಗತ್ಯವಾದ ಎಲ್ಲಾ ಸೌಲಭ್ಯಗಳು ಇಲ್ಲೆ ದೊರಕುವಂತೆ ಮಾಡುತ್ತೇವೆ ಎಂದರು.
ಕಾವೇರಿ ನೀರು ರಕ್ಷಣೆಗೆ ಹೋರಾಟ
ಕೆಆರ್‌ಎಸ್‌ ಜಲಾಶಯದಿಂದ ಮುಂದಿನ ೧೫ ದಿನಗಳ ವರೆಗೆ ನಿತ್ಯ ೫ ಸಾವಿರ ಕ್ಯುಸೆಕ್ಸ್‌ ಕಾವೇರಿ ನೀರು ಹರಿಸುವಂತೆ ಕಾವೇರಿ ನದಿ ನೀರು ನಿರ್ವಹಣಾ ಸಮಿತಿ ಕರ್ನಾಟಕಕ್ಕೆ ಸೂಚಿಸಿರುವುದು ಅವೈಜ್ಞಾನಿಕ ತೀರ್ಮಾನ. ನಮ್ಮಲ್ಲಿ ಕುಡಿಯಲು ನೀರಿಲ್ಲದಿರುವಾಗ ತಮಿಳುನಾಡು ವ್ಯವಸಾಯಕ್ಕೆ ನೀರು ಕೇಳುತ್ತಿರುವುದು ಸರಿಯಲ್ಲ. ರಾಜ್ಯ ಸರ್ಕಾರ ರೈತರ ಹಿತಾಸಕ್ತಿ ಕಾಪಾಡಬೇಕು. ಸಧ್ಯದ ಪರಿಸ್ಥಿತಿಯನ್ನು ಕಾವೇರಿ ನದಿ ನೀರು ನಿರ್ವಹಣಾ ಸಮಿತಿಗೆ ಮನವರಿಕೆ ಮಅಡಿಕೊಡಬೇಕು. ನಾವು ನಮ್ಮ ರೈತರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಯಾವುದೇ ರೀತಿಯ ಕಾನೂನು ಹೋರಾಟಕ್ಕೆ ಸಿದ್ದರಾಗಿದ್ದೇವೆ ಎಂದರು.
ಈ ಸಂದರ್ಭದಲ್ಲಿ ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್‌.ಕೆಂಪೊಗೌಡ, ತಾಲ್ಲೂಕು ಅಧ್ಯಕ್ಷ ನಾಗರಾಜು, ಆಡಳಿತ ವೈದ್ಯಾಧಿಕಾರಿ ಡಾ.ಅರವಿಂದ್‌, ಮುಖಂಡರಾದ ಹನುಮಂತನಗರದ ಸ್ವಾಮಿಗೌಡ, ಪುರಸಭೆ ಮಾಜಿ ಅಧ್ಯಕ್ಷ ಹುಚ್ಚೇಗೌಡ, ವಕೀಲ ಹಾಗೂ ಹೌಸಿಂಗ್‌ ಬೋರ್ಡ್‌ ನಿರ್ದೇಶಕ ಮುರುಳಿ, ವಿಜಯಕುಮಾರ್‌, ಶ್ರೀನಿವಾಸ್‌, ಧರ್ಮರಾಜು, ರಾಮಚಂದ್ರ ಮುಂತಾದವರು ಇದ್ದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು