ತುಮಕೂರು: ತಮ್ಮ ಪ್ರೀತಿಯ ಅಜ್ಜಿ ಮೃತಪಟ್ಟ ಕಾರಣ ಮನನೊಂದ ಮೂವರು ಸಹೋದರಿಯರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಚಿಕ್ಕನಾಯಕನಹಳ್ಳಿ ತಾಲ್ಲೂಕು ಬರಕನಹಾಲ್ ತಾಂಡ್ಯದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ರಂಜಿತಾ (24), ಬಿಂದು (21) ಹಾಗೂ ಚಂದನಾ (18) ಎಂಬುವರೇ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆಗೆ ಶರಣಾಗಿರುವ ದುರ್ದೈವಿ ಸಹೋದರಿಯರು. ಈ ನತದೃಷ್ಟ ಸಹೋದರಿಯರ ತಂದೆ-ತಾಯಿ ಇಬ್ಬರೂ ದಶಕಗಳ ಹಿಂದೆಯೇ ನಿಧನರಾಗಿದ್ದರು. ಕಳೆದ 3 ತಿಂಗಳ ಹಿಂದೆಯμÉ್ಟ ಇವರನ್ನು ಸಾಕುತ್ತಿದ್ದ ಅಜ್ಜಿಯೂ ಸಹ ಸಾವನ್ನಪ್ಪಿದ್ದು, ಈ ಸಹೋದರಿಯರು ಅನಾಥರಾಗಿದ್ದರು. ರಂಜಿತಾ ಮತ್ತು ಬಿಂದು ಇಬ್ಬರು ಕೆ.ಬಿ.ಕ್ರಾಸ್ನ ಗಾಮೆರ್ಂಟ್ಸ್ಗೆ ಕೆಲಸಕ್ಕೆ ಹೋಗುತ್ತಿದ್ದರು. ಚಂದನಾ ವಿದ್ಯಾಭ್ಯಾಸ ಮಾಡುತ್ತಿದ್ದಳು. ಈ ಮೂವರೂ ಬಾಲದೇವರಹಟ್ಟಿಯಿಂದ ಬರಕನಹಾಲ್ ತಾಂಡ್ಯಕ್ಕೆ ಹೋಗುವ ದಾರಿಯ ರಸ್ತೆ ಬದಿಯಲ್ಲಿರುವ ತಮ್ಮ ಒಂಟಿ ಮನೆಯಲ್ಲಿ ಕಳೆದ ಒಂಭತ್ತು ದಿನಗಳ ಹಿಂದೆಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರುಗಳ ದೇಹ ಕೊಳೆತು ವಾಸನೆ ಬಂದಿದ್ದರಿಂದ ದಾರಿಹೋಕರು ನೋಡಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಘಟನೆಯ ಸುದ್ದಿ ತಿಳಿದ ಕೂಡಲೇ ಹುಳಿಯಾರು ಪೊಲೀಸರು ಸ್ಥಳಕ್ಕೆ ಧಾವಿಸಿ ಮನೆಯ ಮೇಲ್ಛಾವಣಿಯ ಹೆಂಚು ತೆಗೆದು ನೋಡಿದಾಗ ಈ ಮೂರು ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಮೃತ ದೇಹಗಳನ್ನು ಹೊರತೆಗೆದು ಚಿಕ್ಕನಾಯಕನಹಳ್ಳಿ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಈ ಸಹೋದರಿಯರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಹುಳಿಯಾರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ತಿಪಟೂರು ಎಎಸ್ಪಿ ಸಿದ್ಧಾರ್ಥಗೋಯಲ್, ಚಿಕ್ಕನಾಯಕನಹಳ್ಳಿ ಸಿಪಿಐ ನಿರ್ಮಲ, ಹುಳಿಯಾರು ಪಿಎಸ್ಐ ಮೂರ್ತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
0 ಕಾಮೆಂಟ್ಗಳು