ಡಿಎಲ್, ಇನ್ಸುರೆನ್ಸ್, ದಾಖಲೆ ಇಲ್ಲದೆ ಯಾವುದೇ ಕಾರಣಕ್ಕೂ ವಾಹನ ಚಾಲನೆ ಮಾಡಬಾರದು : ವಿದ್ಯಾರ್ಥಿಗಳಿಗೆ ಸಂಚಾರ ನಿಯಮಗಳ ಬಗ್ಗೆ ಪಾಠ ಮಾಡಿದ ಇನ್ಸ್‍ಪೆಕ್ಟರ್ ಸಂತೋಷ್ ಕಶ್ಯಪ್

 ವರದಿ-ಶಾರುಕ್ ಖಾನ್, ಹನೂರು 

ಹನೂರು : ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಬಗ್ಗೆ ಹನೂರು ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಸಂತೋಷ್ ಕಶ್ಯಪ್ ವಿಧ್ಯಾರ್ಥಿಳಿಗೆ ಪಾಠ ಹೇಳಿ ಅರಿವು ಮೂಡಿಸಿದರು. 
ಪಟ್ಟಣದ ವಿವೇಕಾನಂದ ಶಾಲೆಯಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಮತ್ತು 112 ಅರಿವು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಪ್ರತಿದಿನ ಸಾವಿರಾರು ಜನರು ಅಪಘಾತದಲ್ಲಿ ಮೃತ ಪಡುತ್ತಿರುವುದು ಆತಂಕದ ವಿಷಯ. ವಿದ್ಯಾರ್ಥಿಗಳು ಹದಿನೆಂಟು ವರ್ಷ ತುಂಬುವವರೆಗೂ ವಾಹನ ಚಾಲನೆ ಮಾಡಬಾರದು. ಇದು ಅಪರಾಧ. ವಾಹನ ಚಾಲಕರು ಪ್ರತಿಯೊಬ್ಬರೂ ಚಾಲನಾ ಪರವಾನಗಿ, ವಾಹನದ ವಿಮೆ, ವಾಹನ ಪರವಾನಗಿ ಸೇರಿದಂತೆ ಅಗತ್ಯ ದಾಖಲೆ ಇಟ್ಟುಕೊಳ್ಳಬೇಕು. ತಪಾಸಣೆ ವೇಳೆ ಅವುಗಳನ್ನು ಪೊಲೀಸರಿಗೆ ತೋರಿಸಬೇಕೆಂದು ಸಲಹೆ ನೀಡಿದರು.

ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಗುರಿ ಅಥವಾ ಉದ್ದೇಶವನ್ನು ಇಟ್ಟುಕೊಂಡು ಸಾಧನೆ ಮಾಡಬೇಕು. ಅದನ್ನು ಹೊರತುಪಡಿಸಿ ಸಮಾಜಕ್ಕೆ ತೊಂದರೆ ಉಂಟಾಗುವಂತಹ ಕೆಲಸವನ್ನು ಮಾಡಬಾರದು, ಪೊಲೀಸ್ ಇಲಾಖೆ ರಾಜ್ಯಾದ್ಯಂತ 112 ಸೇವೆ ಜಾರಿಗೆ ತಂದಿದ್ದು, ತುರ್ತು ಸಂದರ್ಭಗಳಲ್ಲಿ ಅಪಘಾತ, ಗಲಾಟೆ ಸೇರಿದಂತೆ ಸಮಾಜಕ್ಕೆ ತೊಂದರೆಯಾಗುವುದನ್ನು ತಡೆಯುವ ನಿಟ್ಟಿನಲ್ಲಿ ಈ ಸಂಖ್ಯೆಯ ಸಹಾಯ ಪಡೆದುಕೊಳ್ಳಬೇಕು. ತಮ್ಮ ಸುತ್ತ ಮುತ್ತ ಅಪರಾಧ ಪ್ರಕರಣಗಳು ಕಂಡುಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿಯನ್ನು ತಿಳಿಸಬೇಕು. ಮಾಹಿತಿದಾರರ ಹೆಸರುಗಳನ್ನು ಗೌಪ್ಯವಾಗಿ ಇಡಲಾಗುತ್ತದೆ ಹಾಗೂ ಇಲಾಖೆಯು ಸದಾ ನಿಮ್ಮ ಜೊತೆಯಲ್ಲಿರುತ್ತದೆ ಎಂದು ತಿಳಿಸಿದರು.
ವಿವೇಕಾನಂದ ಶಾಲೆಯ ಪ್ರಾಂಶುಪಾಲರಾದ ಮಧುಸೂದನ್ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು