ವೈದ್ಯರ ನಿರ್ಲಕ್ಷ್ಯ : ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೆ ಅವಳಿ ಮಕ್ಕಳ ಸಮೇತ ತಾಯಿ ಸಾವು

 ತುಮಕೂರು : ವೈದ್ಯರ ನಿರ್ಲಕ್ಷ್ಯದಿಂದ ತಾಯಿ ಮತ್ತು ಅವಳಿ ಮಕ್ಕಳು ಸೇರಿ ಮೂವರು ಸಾವನ್ನಪ್ಪಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ತಮಿಳುನಾಡು ಮೂಲದ ಕಸ್ತೂರಿ ಎಂದು ಗುರುತಿಸಲಾಗಿದೆ.
ತುಮಕೂರು ಜಿಲ್ಲೆಯ ಭಾರತಿ ನಗರದ ಅಭಯ ಆಂಜನೇಯ ಸ್ವಾಮಿ ದೇವಸ್ಥಾನದ ಸಮೀಪದಲ್ಲಿ ವಾಸವಾಗಿದ್ದ ಅನಾಥ ಮಹಿಳೆಗೆ ಹೊಟ್ಟೆ ನೋವು ಕಾಣಿಸಿಕೊಂಡ ಕಾರಣ ಸ್ಥಳೀಯ ನಿವಾಸಿಗಳು ಸೇರಿಕೊಂಡು ಜಿಲ್ಲಾ ಆಸ್ಪತ್ರೆಗೆ ಆಟೋ ಮೂಲಕ ಕಳುಹಿಸಿದ್ದರು. ಈ ವೇಳೆ ಬಾಣಂತಿ ಮಹಿಳೆಯೊಂದಿಗೆ ನೆರೆಯ ವೃದ್ದೆಯೊಬ್ಬರು ಹೋಗಿದ್ದರು ಎಂದು ತಿಳಿದು ಬಂದಿದೆ.
ಈ ಮಧ್ಯೆ ಆಸ್ಪತ್ರೆಯಲ್ಲಿ ಮಹಿಳೆಗೆ ತಾಯಿ ಕಾರ್ಡ್ ಇಲ್ಲದ ನೆಪವೊಡ್ಡಿ ವೈದ್ಯರು ಆಸ್ಪತ್ರೆಗೆ ದಾಖಲಿಸದೆ ಹಿಂದಕ್ಕೆ ಕಳುಹಿಸಿದ್ದರು ಎಂಬ ಆರೋಪ ದಟ್ಟವಾಗಿ ಕೇಳಿಬಂದಿದೆ. 
ವೈದ್ಯರ ಬಳಿ ಚಿಕಿತ್ಸೆ ನೀಡುವಂತೆ ಸಾಕಷ್ಟು ಬಾರಿ ಮನವಿ ಮಾಡಿದರೂ ಕೂಡ ಚಿಕಿತ್ಸೆ ನೀಡದೆ ವೈದ್ಯರು ನಿರ್ಲಕ್ಷ್ಯ ವಹಿಸಿದ್ದರಿಂದ ಮಕ್ಕಳು ಮತ್ತು ತಾಯಿ ಸೇರಿ ಮೂವರು ಸಾವನ್ನಪ್ಪಿದ್ದಾರೆ.
ಇದರ ಹೊರತಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಬದಲು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಬರೆದು ಕೊಡುತ್ತೇವೆ ಅಲ್ಲಿ ಚಿಕಿತ್ಸೆ ಪಡೆಯಬಹುದು ಎಂದು ಗರ್ಭಿಣಿ ಮಹಿಳೆಗೆ ತಿಳಿಸಿದ್ದಾರೆ ಎಂಬ ಆರೋಪವೂ ಕೇಳಿಬರುತ್ತಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಹಣದ ಕೊರತೆಯಿಂದಾಗಿ ಮಹಿಳೆ ಮನೆಗೆ ವಾಪಸ್ ಹೋಗಿದ್ದರು. ಇದಾದ ಬಳಿಕ ಬೆಳಗ್ಗಿನ ಜಾವ ಮಹಿಳೆ ಅನಾರೋಗ್ಯದ ಮಧ್ಯೆ ಒಂದು ಮಗುವಿಗೆ ಜನ್ಮ ನೀಡಿದ್ದ ಬೆನ್ನಲ್ಲೇ ಮತ್ತೊಂದು ಜನ್ಮ ನೀಡಿದಾಗ ಅಧಿಕ ರಕ್ತಸ್ರಾವದಿಂದಾಗಿ 3 ಮಂದಿಯೂ ಕೂಡ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಮಂಜುನಾಥ್ ಭೇಟಿ ನೀಡಿದ್ದು, ಘಟನೆಗೆ ಸಂಬಂಧಿಸಿದಂತೆ ಸ್ಥಳೀಯರು ಜಿಲ್ಲಾ ವೈಧ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು