ಮೈಸೂರು: ತಾಲ್ಲೂಕಿನ ರಮ್ಮನಹಳ್ಳಿ ಪಟ್ಟಣ ಪಂಚಾಯಿತಿಯ ಹಂಚ್ಯಾ ಗ್ರಾಮದ ಹಂಚ್ಯಾ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನೂತನ ಆಡಳಿತ ಮಂಡಳಿಯನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಐದು ವರ್ಷದ ಅವಧಿಗೆ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ನಾಗೇಂದ್ರಮೂರ್ತಿ, ಉಪಾಧ್ಯಕ್ಷರಾಗಿ ಮಹದೇವ ಅವರು ಅವಿರೋಧವಾಗಿ ಆಯ್ಕೆಯಾದರು.
ಪ್ರವರ್ಗ-ಬಿ ನಲ್ಲಿ ಜವರೇಗೌಡ, ಪ್ರವರ್ಗ-ಎ ನಲ್ಲಿ ತಿಮ್ಮಶೆಟ್ಟಿ, ಪರಿಶಿಷ್ಟ ಪಂಗಡ ವಿಭಾಗದಲ್ಲಿ ಸಿದ್ದಲಿಂಗು, ಪರಿಶಿಷ್ಟ ಜಾತಿ ಚಿಕ್ಕನಂಜಯ್ಯ, ಮಹಿಳಾ ಮೀಸಲು ವಿಭಾಗದಲ್ಲಿ ಪುಟ್ಟಮ್ಮ, ಸಾಕಮ್ಮ, ಸಾಮಾನ್ಯ ಕ್ಷೇತ್ರದಲ್ಲಿ ದೇವರಾಜು, ರಾಮಚಂದ್ರ, ಮಹದೇವ, ಎಚ್.ಎಂ.ಶಿವಣ್ಣ, ಚನ್ನಬೋರೇಗೌಡ, ಮೊದಲಾದವರು ಅವಿರೋಧವಾಗಿ ಆಯ್ಕೆಯಾದರು.
ನೂತನ ಅಧ್ಯಕ್ಷ ನಾಗೇಂದ್ರಮೂರ್ತಿ ಮಾತನಾಡಿ, ಹಂಚ್ಯಾ ಡೇರಿಗೆ ತನ್ನದೇ ಆದ ಇತಿಹಾಸವಿದ್ದು, ಅದನ್ನು ಉಳಿಸಿಕೊಂಡು ಮುನ್ನಡೆಯಲು ಪ್ರಯತ್ನಿಸುತ್ತೇನೆ. ಇದುವರೆವಿಗೂ ಚುನಾವಣೆಯೇ ನಡೆಸದಂತೆ ಅವಿರೋಧವಾಗಿ ಆಯ್ಕೆ ಮಾಡುತ್ತಾ ಬಂದಿದ್ದು, ನನ್ನ ಗೆಲುವಿಗೆ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಪಾರದರ್ಶಕ ಹಾಗೂ ಅಭಿವೃದ್ಧಿ ಪಥದತ್ತ ಸಾಗುತ್ತಿರುವ ಡೇರಿಗೆ ಸಹಕಾರಿಯಾಗಿ ಜತೆಗೆ ನಿಲ್ಲುತ್ತೇನೆಂದರು.
ಇದೇ ವೇಳೆ ಹಂಚ್ಯಾ ಗ್ರಾ.ಪಂ. ಮಾಜಿ ಅಧ್ಯಕ್ಷ ಎಚ್.ಸಿ.ಕುಮಾರಸ್ವಾಮಿ, ಮಾಜಿ ಸದಸ್ಯರಾದ ಚೆನ್ನಯ್ಯ ಸೇರಿ ಅನೇಕರು ನೂತನ ಆಡಳಿತ ಮಂಡಳಿ ಸದಸ್ಯರನ್ನು ಅಭಿನಂದಿಸಿದರು.
ಚುನಾವಣಾಧಿಕಾರಿ ಮಂಜು, ಕಾರ್ಯನಿರ್ವಾಹಕ ಎಚ್.ಎಸ್.ರಾಮಚಂದ್ರು ಉಪಸ್ಥಿತರಿದ್ದರು.