ಮುಖಂಡರಿಂದ ವ್ಯಾಪಕ ಪ್ರಶಂಸೆ

ವರದಿ-ನಜೀರ್ ಅಹಮದ್

ಮೈಸೂರು : ನಗರದ ಕೆಟಿ ಸ್ಟ್ರೀಟ್, ಮಂಡಿಪೇಟೆ ಬಳಿಯ ಗರಡಿಕೇರಿಯಲ್ಲಿ ಶಿಥಿಲಗೊಂಡಿದ್ದ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ೬೦ ಸಾವಿರ ರೂ. ವೆಚ್ಚದಲ್ಲಿ ದುರಸ್ತಿಗೊಳಿಸುವ ಮೂಲಕ ಕಾಂಗ್ರೆಸ್ ಮುಖಂಡ ಎಂ.ಶಿವಣ್ಣ ತಮ್ಮ ಹುಟ್ಟುಹಬ್ಬವನ್ನು ಸರ್ಕಾರಿ ಶಾಲೆಯ ಮಕ್ಕಳೊಂದಿಗೆ ಆಚರಿಸಿಕೊಂಡರು.

ಸೋಮವಾರ ಬೆಳಗ್ಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ.ವಿಜಯಕುಮಾರ್, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮತ್ತಿತರ ಮುಖಂಡರ ಜತೆಗೂಡಿ ನವೀಕರಿಸಿದ ಸರ್ಕಾರಿ ಶಾಲಾ ಕಟ್ಟಡವನ್ನು ಉದ್ಘಾಟಿಸಿದರು. 

ಈ ಶಾಲೆಯ ಪ್ರಾರಂಭಕ್ಕೂ ತಾವೇ ಕಾರಣರಾಗಿದ್ದ ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವಣ್ಣ ಅವರು, ತಮ್ಮ ಹುಟ್ಟು ಹಬ್ಬವನ್ನು ಯಾವುದೇ ರೀತಿಯ ಆಡಂಬರ, ದುಂದು ವೆಚ್ಚದಲ್ಲಿ ಆಚರಿಸಲು ಮುಂದಾಗದೆ, ಗರಡಿ ಕೇರಿಯ ಸರ್ಕಾರಿ ಶಾಲೆಗೆ ಸುಣ್ಣ, ಬಣ್ಣ ಹೊಡೆಸಿ, ಶಿಥಿಲಗೊಂಡಿದ್ದ ಕಟ್ಟಡದ ದುರಸ್ತಿ ಮತ್ತು ಶೌಚಾಲಯವನ್ನೂ ಸಹ ಆಧುನೀಕರಣಗೊಳಿಸಿ ಸರ್ಕಾರಿ ಶಾಲೆಯಲ್ಲಿ ಕಲಿಯುವ ಬಡ ಮಕ್ಕಳಿಗೆ ಅನುಕೂಲ ಕಲ್ಪಿಸಿದರು. 

ಜತೆಗೆ ಸರ್ಕಾರಿ ಶಾಲೆಯ ಮಕ್ಕಳಿಗೆ ನೋಟ್‌ಬುಕ್ ವಿತರಿಸಿದರು. ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳು ಕೇಕ್ ಕತ್ತರಿಸಿ ಶಿವಣ್ಣ ಅವರಿಗೆ ಜನ್ಮ ದಿನದ ಶುಭಾಶಯ ಕೋರಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ. ವಿಜಯಕುಮಾರ್ ಮಾತನಾಡಿ, ಹಲವಾರು ಮುಖಂಡರು ತಮ್ಮ ಹುಟ್ಟುಹಬ್ಬದಲ್ಲಿ ಭಾರಿ ಗಾತ್ರದ ಫ್ಲೇಕ್ಸ್ ಹಾಕಿಸುವುದು, ಫ್ಲಕ್ಸ್‌ಗಳಿಗೆ ಹಾಲು ಸುರಿಯುವುದು, ಐಶಾರಾಮಿ ಹೋಟೆಲ್‌ಗಳಲ್ಲಿ ಪಾರ್ಟಿ ಮಾಡುವುದು ಸೇರಿದಂತೆ ಮತ್ತಿತರ ರೀತಿಯಲ್ಲಿ ದುಂದು ವೆಚ್ಚಗಳನ್ನು ಮಾಡುವುದನ್ನು ನಾವು ಕಾಣಬಹುದು. ಆದರೇ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಶಿವಣ್ಣ ಅವರು ತಮ್ಮ ಸ್ವಂತ ಖರ್ಚಿನಲ್ಲಿ 

ಶಿಥಿಲಗೊಂಡಿದ್ದ ಒಂದು ಸರ್ಕಾರಿ ಶಾಲೆಯನ್ನು ದುರಸ್ತಿ ಮಾಡುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವುದು ಇಂದಿನ ಯುವಕರಿಗೆ ಮಾದರಿಯಾಗಿದೆ ಎಂದು ಶ್ಲಾಘೀಸಿದರಲ್ಲದೇ, ಮುಂದೆ ಅವರಿಗೆ ಸರ್ಕಾದಲ್ಲಿ ಉನ್ನತ ಸ್ಥಾನಮಾನ ದೊರಕಲಿದೆ ಎಂದರು.

ಈ ಸಂದರ್ಭದಲ್ಲಿ ಡಿಹೆಚ್‌ಓ ಕುಮಾರಸ್ವಾಮಿ, ಕೆಪಿಸಿಸಿ ವಕ್ತಾರರಾದ ಎಂ.ಲಕ್ಷ್ಮಣ್, ಜಿಪಂ ಮಾಜಿ ಅಧ್ಯಕ್ಷರಾದ ಬಿ.ಎಂ.ರಾಮು, ಮಾಜಿ ಮೇಯರ್ ಅನಂತ, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ರಾಚಪ್ಪ, ಸುರೇಶ್ ಬಾಬು, ಮುಖ್ಯಶಿಕ್ಷರಾದ ಅಭಿಲಾಷ್, ಸಹ ಶಿಕ್ಷಕರಾದ ದೀಪ, ಸುಮ ಮತ್ತಿತರರು ಇದ್ದರು.