ಮೈಸೂರ್ ಮೇಲ್ ವರದಿ ಫಲಶ್ರುತಿ: ಒಣಗಿ ಬೀಳುವ ಹಂತದಲ್ಲಿದ್ದ ರಸ್ತೆ ಬದಿಯ ಬೃಹತ್ ಮರಗಳ ತೆರವು
ಫೆಬ್ರವರಿ 03, 2023
ಶಾರುಕ್ ಖಾನ್, ಹನೂರು ಹನೂರು : ಒಣಗಿ ಹೋಗಿ ಬೀಳುವ ಹಂತದಲ್ಲಿದ್ದ ರಸ್ತೆ ಬದಿಯ ಬೃಹತ್ ಗಾತ್ರದ ಹಳೆಯ ಮರಗಳನ್ನು ಅರಣ್ಯಾಧಿಕಾರಿಗಳು ಇಂದು ಬೆಳಿಗ್ಗೆ ತೆರವು ಗೊಳಿಸಿದ್ದು, ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟ ಮುಖ್ಯ ರಸ್ತೆಯಿಂದ ಪೊನ್ನಾಚಿ ಕ್ರಾಸ್ ಮುಖ್ಯ ರಸ್ತೆಯಲ್ಲಿರುವ ದೊಡ್ಡ ಗಾತ್ರದ ಮರಗಳು ಯಾವುದೇ ಸಮಯದಲ್ಲಿ ಬೀಳುವ ಹಂತದಲ್ಲಿದ್ದವು. ಈ ರಸ್ತೆಯಲ್ಲಿ ದಿನನಿತ್ಯ ಸಾವಿರಾರು ಜನರು ಓಡಾಡುತ್ತಿದ್ದರಿಂದ ಒಂದು ವೇಳೆ ಜನರ ಮೇಲೆ ಮರ ಬಿದ್ದರೆ ಭಾರಿ ಪ್ರಾಣಾಪಾಯ ಉಂಟಾಗುವ ಸಾಧ್ಯತೆಯೂ ಇತ್ತು. ಮರ ತೆರವು ಮಾಡುವಂತೆ ಸಾರ್ವಜನಿಕರು ಅರಣ್ಯ ಇಲಾಖೆಗೆ ಅರ್ಜಿ ಕೊಟ್ಟರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ವಿಚಾರವಾಗಿ ಮೈಸೂರ್ ಮೇಲ್ ವಿಸ್ತøತ ವರದಿ ಪ್ರಕಟಿಸಿ ಸಾರ್ವಜನಿಕರು ಮತ್ತು ಅಧಿಕಾರಿಗಳ ಗಮನ ಸೆಳೆದಿತ್ತು. ವರದಿಯಿಂದ ಎಚ್ಚೆತ್ತ ಅರಣ್ಯಾಧಿಕಾರಿಗಳು ಶುಕ್ರವಾರ ಬೆಳ್ಳಂಬೆಳಿಗ್ಗೆ ಜೆಸಿಬಿ ಮೂಲಕ ಬೃಹತ್ ಮರವನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದರು. ಮರ ತೆರವು ಬೇಸರ: ದಿನನಿತ್ಯ ಲಕ್ಷಾಂತರ ಗ್ಯಾಲನ್ ಆಮ್ಲಜನಕ ಉತ್ಪತ್ತಿ ಮಾಡುತ್ತಾ, ಮನುಷ್ಯರು ಮತ್ತು ಪಕ್ಷಿಗಳಿಗೆ ಆಸರೆಯಾಗಿದ್ದ ಬೃಹತ್ ಗಾತ್ರದ ಮರಗಳು ತೆರವು ಮೈಸೂರ್ ಮೇಲ್ ಪತ್ರಿಕಾ ಬಳಗಕ್ಕೆ ಬೇಸರ ತಂದಿದೆಯಾದರೂ, ಜನರ ಪ್ರಾಣ ರಕ್ಷಣೆಗೆ ನಮ್ಮ ಸುದ್ದಿ ಅನಿವಾರ್ಯವಾಗಿತ್ತು. ಮರ ತೆರವಿಗೆ ವಿಷಾದಿಸುತ್ತಾ ಅರಣ್ಯ ಇಲಾಖೆಯ ಸಸಿ ನೆಡುವ ಕಾರ್ಯಕ್ರಮಕ್ಕೆ ನಮ್ಮ ಬಳಗ ಕೈಜೋಡಿಸುತ್ತದೆ ಎಂಬ ಭರವಸೆ ನೀಡುತ್ತೇವೆ.
0 ಕಾಮೆಂಟ್ಗಳು