ನಾನು ಅಲೆಮಾರಿಯಾದರೇ ಶ್ರೀನಿವಾಸ ಪ್ರಸಾದ್ ಅಲೆಮಾರಿಗಳ ರಾಜ : ಹಳ್ಳಿ ಹಕ್ಕಿ ವಿಶ್ವನಾಥ್ ವಾಗ್ದಾಳಿ


ಮೈಸೂರು: ನಾನು ಅಲೆಮಾರಿಯಾದರೆ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅಲೆಮಾರಿಗಳ ರಾಜ ಎಂದು ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್ ಟೀಕಿಸಿದರು.
ಗುರುವಾರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಪ್ರಸಾದ್ ಸ್ನೇಹ 50 ವರ್ಷದ್ದು, ತಮ್ಮ ಸ್ವಾರ್ಥಕ್ಕಾಗಿ ಸ್ನೇಹವನ್ನು ಮರೆತು ಟೀಕಿಸಿರುವುದು ಬೇಸರ ತಂದಿದೆ ಎಂದರು.
ನೀವು ಎಲ್ಲೆಲ್ಲಿದ್ರಿ ಪ್ರಸಾದ್ ಆರ್‍ಎಸ್‍ಎಸ್ ಕಾರ್ಯಕರ್ತರಾಗಿದ್ದವರು ನೀವು. ನಿಜಲಿಂಗಪ್ಪ ಅವರ ಸಂಸ್ಥಾ ಕಾಂಗ್ರೆಸ್ ಸೇರಿದಿರಿ. ನಂತರ ಜನತಾ ಪಾರ್ಟಿ, ಕಾಂಗ್ರೆಸ್, ಸಮತಾ ಪಾರ್ಟಿ, ಜೆಡಿಯು, ಜೆಡಿಎಸ್‍ಗೆ ಹೋಗಿ ಬಂದಿದ್ದೀರಿ. ಮತ್ತೆ ಕಾಂಗ್ರೆಸ್ ಸೇರಿದಿರಿ. ಈಗ ಬಿಜೆಪಿಯಲ್ಲಿದ್ದೀರಿ. ನೀವು ನನ್ನನ್ನು ಅಲೆಮಾರಿ ಎನ್ನುತ್ತೀರಲ್ಲಾ?’ ಎಂದು ಕೇಳಿದರು.
‘ನೀವು ದಿಢೀರನೆ ನನ್ನ ಮೇಲೆ ಮುಗಿಬಿದ್ದಿರುವ ಹಿನ್ನೆಲೆ ಏನು? ಅಂತಾ ಗೊತ್ತು. ಸಚಿವ ಸಂಪುಟ ವಿಸ್ತರಣೆಯ ಮಾತು ಕೇಳಿ ಬರುತ್ತಿರುವಾಗ, ನನ್ನನ್ನು, ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯ ಅವರನ್ನು ಟೀಕಿಸುವ ಮೂಲಕ ಯಾರನ್ನೋ ಮೆಚ್ಚಿಸಿ ಅಳಿಯ, ನಂಜನಗೂಡು ಶಾಸಕ ಹರ್ಷವರ್ಧನ್‍ಗೆ  ಸಚಿವ ಸ್ಥಾನ ಕೊಡಿಸುವ ಸ್ವಾರ್ಥ ನಿಮ್ಮದು. ಇನ್ನೊಬ್ಬ ಅಳಿಯನನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರದಿಂದ ನಿಲ್ಲಿಸಬೇಕು. ಮಗಳನ್ನು ತಿ.ನರಸೀಪುರಕ್ಕೆ ತರಲೆಂದು ಮಾತನಾಡುತ್ತಿದ್ದೀರಿ’ ಎಂದು ಟೀಕಿಸಿದರು.
‘ನಾನು ಜೆಡಿಎಸ್‍ನಲ್ಲೇ ಇದ್ದೆ ನೀವು ನನ್ನನ್ನು ಬಿಜೆಪಿಗೆ ಕರೆತಂದಿದ್ದನ್ನು ಮರೆತಿರಾ? ಸ್ನೇಹಕ್ಕೆ ಬಲಿಯಾದವರ ಬಗ್ಗೆ ಹಗುರವಾಗಿ ಮಾತನಾಡುವ ಮುನ್ನ ಯೋಚಿಸಬೇಕು’ ಎಂದು ಹೇಳಿದರು.
‘ಕಾಂಗ್ರೆಸ್ನವರನ್ನು ನಾನು ಮಾತಾಡಿಸಿದ್ದೇ ತಪ್ಪಾ? ಮಲ್ಲಿಕಾರ್ಜುನ ಖರ್ಗೆ ಹಿರಿಯ ರಾಜಕಾರಣಿ. ಮುತ್ಸದ್ದಿ. ನಿರ್ವಹಿಸಿದ ಖಾತೆಗೆಲ್ಲಾ ಜೀವ ತುಂಬಿದವರು. ಅವರ ಬಗ್ಗೆ ಲಘುವಾಗಿ ಮಾತಾನಾಡುವುದು ಸರಿಯಲ್ಲ. ರಾಜಕಾರಣದಲ್ಲಿ ಆರೋಪ-ಪ್ರತ್ಯಾರೋಪ ಸಹಜ. ಆದರೆ, ಬೇರೆ ಪಕ್ಷದವರನ್ನು ಭೇಟಿಯಾಗುವುದು ಘೋರ ಅಪರಾಧವೇ? ನನ್ನ ಬಾವುಟ ಬದಲಾಗಿರಬಹುದು; ಕಾರ್ಯಸೂಚಿ ಬದಲಾಗಿಲ್ಲ. ಕಾಂಗ್ರೆಸ್ ನನ್ನ ತಾಯಿ ಎಂದೇ ಹಿಂದೆಯೂ ಹೇಳಿದ್ದೇನೆ; ಮುಂದೆಯೂ ಹೇಳುತ್ತೇನೆ. 40 ವರ್ಷ ಸಾಕಿದ ಪಕ್ಷವದು. ಜೆಡಿಎಸ್ ಜಾತ್ಯತೀತ ಮನೋಭಾವ ಬೆಳೆಸಿದೆ. ಬಿಜೆಪಿಗೆ ಬಂದ ಮೇಲೂ ನನ್ನ ತತ್ವ-ಸಿದ್ಧಾಂತವನ್ನು ಬಿಟ್ಟಿಲ್ಲ’ ಎಂದರು.
ಬಿಜೆಪಿಯಲ್ಲಿ ನಿಮ್ಮನ್ನು ಸರಿಯಾಗಿ ನಡೆಸಿಕೊಳ್ಳಲಾಗುತ್ತಿದೆಯೇ ಎಂಬ ಪ್ರಶ್ನೆಗೆ, ‘ಹೊರಗಿನಿಂದ ಎಲ್ಲವೂ ಚೆನ್ನಾಗಿಯೇ ಕಾಣುತ್ತದೆ. ಒಳ ಹೋದಾಗಲೇ ಅಲ್ಲಿ ಏನೇನಿದೆ ಎನ್ನುವುದು ಗೊತ್ತಾಗುತ್ತದೆ’ ಎಂದು ಪ್ರತಿಕ್ರಿಯಿಸಿದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು