ಪ್ರೇಯಸಿಯನ್ನು ಕೊಂದು ಕಬ್ಬಿನ ಗದ್ದೆಯಲ್ಲಿ ಹೂತಿಟ್ಟು ಸಿಕ್ಕಿಬಿದ್ದ ಪ್ರಿಯಕರ? ಹೂತಿದ್ದ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ ಪೊಲೀಸರು
ಡಿಸೆಂಬರ್ 14, 2022
ಹಾಸನ: ಗಂಡನನ್ನು ತ್ಯಜಿಸಿ ಬೇರೆಯೊಬ್ಬರೊಂದಿಗೆ ಸಂಸಾರ ನಡೆಸುತ್ತಿದ್ದ ವಿವಾಹಿತ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹೊಳೆನರಸೀಪುರ ತಾಲ್ಲೂಕಿನ ಪಾರಸನಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ೨೫ ವರ್ಷದ ಕಾವ್ಯ ಮೃತಪಟ್ಟ ಮಹಿಳೆ. ಈಕೆ ಸಾವನ್ನಪ್ಪಿದ ಬಳಿಕ ಈಕೆಯ ಪ್ರಿಯಕರ ಅವಿನಾಶ್ ಯಾರಿಗೂ ತಿಳಿಯದಂತೆ ಮೃತಳ ಶವವನ್ನು ಕಬ್ಬಿನ ಗದ್ದೆಯಲ್ಲಿ ಹೂತು ಹಾಕಿದ್ದು, ಘಟನೆ ಬೆಳಕಿಗೆ ಬಂದ ನಂತರ ಪೊಲೀಸರು ತಹಶೀಲ್ದಾರ್ ಸಮ್ಮುಖದಲ್ಲಿ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಪ್ರಕಟಣ ಸಂಬAಧ ಆರೋಪಿ ಅವಿನಾಶ್ ಎಂಬುವನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಘಟನೆ ವಿವರ : ಅರಕಲಗೂಡು ತಾಲ್ಲೂಕಿನ ಮುದ್ಲಾಪುರ ಗ್ರಾಮದ ಕಲ್ಪನಾ ಎಂಬುವವರ ಪುತ್ರಿ ಕಾವ್ಯ ಒಂದೂವರೆ ವರ್ಷವಿರುವಾಗಲೇ ತಂದೆಯನ್ನು ಕಳೆದುಕೊಂಡಿದ್ದಳು. ನಂತರ ದೊಡ್ಡಮ್ಮನ ಮನೆಯಲ್ಲಿದ್ದು ವಿದ್ಯಾಭ್ಯಾಸ ಮಾಡಿದ್ದಳು. ಬಿಬಿಎಂ ವ್ಯಾಸಂಗ ಮಾಡಿದ್ದ ಕಾವ್ಯ ಅಕ್ಷಯ್ ಎಂಬುವವನ್ನು ಪ್ರೀತಿಸಿ ವಿವಾಹವಾಗಿದ್ದಳು. ಈ ವಿಷಯವನ್ನು ತಾಯಿಯ ಬಳಿ ಹೇಳಿರಲಿಲ್ಲ. ಮದುವೆಯಾದ ಕೆಲವೇ ತಿಂಗಳಲ್ಲಿ ಸಂಸಾರದಲ್ಲಿ ಹೊಂದಾಣಿಕೆ ಇಲ್ಲದ ಕಾರಣ ಪೊಲೀಸ್ ಠಾಣೆಗೆ ದೂರು ನೀಡಿ ಅಕ್ಷಯ್ ಜೊತೆ ವಿವಾಹ ಸಂಬAಧ ಮುರಿದುಕೊಂಡಿದ್ದಳು. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದ ಕಾವ್ಯ ಕೆಲ ದಿನಗಳ ನಂತರ ಹಾಸನಕ್ಕೆ ವಾಪಾಸ್ಸಾದಳು. ಈ ವೇಳೆ ಆಕೆ ಹೊಳೆನರಸೀಪುರ ತಾಲ್ಲೂಕಿನ ಪಾರಸನಹಳ್ಳಿ ಗ್ರಾಮದ ಅವಿನಾಶ್ ಎಂಬುವನನ್ನು ಪ್ರೀತಿಸುತ್ತಿದ್ದಳು. ಕಳೆದ ಎರಡು ವರ್ಷಗಳಿಂದ ಅವಿನಾಶ್ ಮನೆಯಲ್ಲಿಯೇ ವಾಸವಿದ್ದಳು. ಈ ವಿಷಯವನ್ನೆಲ್ಲಾ ತಾಯಿಗೆ ಹೇಳಿರಲಿಲ್ಲ. ಆದಾಗ್ಯೂ ಫೋನ್ನಲ್ಲಿ ಮಾತನಾಡುತ್ತಿದ್ದಳು. ಕಳೆದ ಒಂದು ತಿಂಗಳಿನಿAದ ತಾಯಿಯ ಬಳಿ ಫೋನ್ನಲ್ಲಿ ಮಾತನಾಡದೆ ಕೇವಲ ವಾಯ್ಸ್ ಮೆಸೇಜ್ ಮಾತ್ರ ಕಳುಹಿಸುತ್ತಿದ್ದಳು. ಮೊಬೈಲ್, ಲ್ಯಾಪ್ಟ್ಯಾಪ್ ತೆಗೆದುಕೊಳ್ಳಬೇಕೆಂದು ಇಪ್ಪತ್ತೆöÊದು ಸಾವಿರ ಹಣವನ್ನು ಹಾಕಿಸಿಕೊಂಡಿದ್ದಳು. ನಂತರ ಇಪ್ಪತ್ತು ದಿನಗಳಿಂದ ಕಾವ್ಯ ತನ್ನ ತಾಯಿಗೆ ಫೋನ್ ಮಾಡಿರಲಿಲ್ಲ. ಅವಳ ಫೋನ್ ಕೂಡ ಸ್ವಿಚ್ ಆಫ್ ಬರುತ್ತಿತ್ತು. ಇದರಿಂದ ಕಾವ್ಯಳ ಪೋಷಕರು ಆತಂಕಗೊAಡಿದ್ದರು. ನಂತರ ಕಲ್ಪನಾ ಅವರಿಗೆ ಅನಾಮಧೇಯ ವ್ಯಕ್ತಿಯೊಬ್ಬರು ಫೋನ್ ಮಾಡಿ ನಿಮ್ಮ ಮಗಳನ್ನು ಸಾಯಿಸಿ ಹೂತು ಹಾಕಿದ್ದಾರೆ ಎಂದು ಗ್ರಾಮದಲ್ಲಿ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದರು. ತಕ್ಷಣ ಮಗಳು ಕಾಣೆಯಾಗಿರುವ ಬಗ್ಗೆ ಕಲ್ಪನಾ ಹೊಳೆನರಸೀಪುರ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅವಿನಾಶ್ನನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ಕಬ್ಬಿನ ಗದ್ದೆಯಲ್ಲಿ ಕಾವ್ಯಾ ಶವವನ್ನು ಹೂತು ಹಾಕಿರುವುದು ಬೆಳಕಿಗೆ ಬಂದಿದೆ. ಅವಿನಾಶ್ ಹಾಗೂ ಆತನ ಪೋಷಕರೇ ನನ್ನ ಮಗಳನ್ನು ಕೊಲೆ ಮಾಡಿ ಹೂತು ಹಾಕಿದ್ದಾರೆ ಎಂದು ಕಾವ್ಯಾ ತಾಯಿ ಕಲ್ಪನಾ ಆರೋಪಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಕಾವ್ಯಾಳದ್ದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದರ ಬಗ್ಗೆ ತಿಳಿಯಲಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದ್ದಾರೆ.
0 ಕಾಮೆಂಟ್ಗಳು