ಮೈಸೂರಿನಲ್ಲಿ ಅದ್ದೂರಿಯಾಗಿ ಜರುಗಿದ ’ವಿಶ್ವ ರೈತ ದಿನಾಚರಣೆ’
ಮೈಸೂರು : ರೈತರು ಮತ್ತು ಸಂಘಟನೆಗಳು ತಮ್ಮ ವೈಯುಕ್ತಿಕ ವಿಚಾರಗಳನ್ನು ವೇದಿಕೆಯೊಳಗೆ ಚರ್ಚಿಸಿಕೊಂಡು ದೇಶದ ಮುಂದೆ ಒಗ್ಗಟ್ಟು ಪ್ರದರ್ಶಿಸಿ ಒಂದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದರೆ ಮಾತ್ರ ದೇಶ ಮತ್ತು ರೈತ ಸಂಕುಲದ ಅಭಿವೃದ್ಧಿ ಸಾಧ್ಯ ಎಂದು ಮೈಸೂರು-ಕೊಡಗು ಸಂಸದರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ನಗರದ ಪುರಭವನದ ಆವರಣದಲ್ಲಿ ಕರ್ನಾಟಕ ರಾಜ್ಯ ರೈತಸಂಘಟನೆಗಳ ಮಹಾ ಒಕ್ಕೂಟದ ಆಶ್ರಯದಲ್ಲಿ ಮತ್ತು ಕರ್ನಾಟಕ ರಾಜ್ಯ ರೈತಸಂಘ(ರೈತಬಣ)ದ ನೇತೃತ್ವದಲ್ಲಿ ಏರ್ಪಡಿಸಿದ್ದ ವಿಶ್ವ ರೈತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ರೈತರ ಒಳಿತಿಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ, ಪ್ರಮುಖವಾಗಿ ವಿಕಸಿತ ಭಾರತ ಪರಿಕಲ್ಪನೆ ಅಡಿಯಲ್ಲಿ ರೈತರ ಸಬಲೀಕರಣಕ್ಕೆ ಮುಂದಾಗಿ ಬಲಿಷ್ಠ ಭಾರತ ನಿರ್ಮಾಣ ಮಾಡುವ ಕನಸು ಹೊಂದಿದ್ದಾರೆ. ಅದರಂತೆ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳು, ಮಣ್ಣಿನ ಫಲವತ್ತತೆ ಕಾಪಾಡುವ ಗೊಬ್ಬರ, ಮಣ್ಣಿನ ಪರೀಕ್ಷೆ, ಹನಿ ನಿರಾವರಿ ಯೋಜನೆಗಳನ್ನು ರೂಪಿಸಿರುವುದಲ್ಲದೇ, ದೇಶಾದ್ಯಂತ ಅನೇಕ ಕೃಷಿ ಅಧ್ಯಯನ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ ಎಂದರು.
ಈ ಭಾಗದಲ್ಲಿ ಅನೇಕ ಕಡೆ ಶುಂಠಿ ಬೆಳೆಗೆ ವಿಪರೀತ ರಾಸಾಯನಿಕ ಗೊಬ್ಬರಗಳನ್ನು ಬಳಸಿರುವ ಕಾರಣ ಮಣ್ಣಿನ ಫಲವತ್ತತೆ ನಶಿಸಿದೆ. ಇದಕ್ಕೆ ಮತ್ತೇ ಜೀವ ಕೊಡುವ ಅವಶ್ಯಕತೆ ಇದ್ದು, ಬೇವಿನ ಹಿಂಡಿಯನ್ನು ಗೊಬ್ಬರವಾಗಿ ಬಳಸಿ ಮಣ್ಣಿನ ಫಲವತ್ತತೆಯನ್ನು ಕಾಪಾಡಬೇಕಿದೆ ಎಂದರು.
ದೇಶದಲ್ಲಿ ಕೃಷಿ ಕ್ಷೇತದಲ್ಲಿ ಕ್ರಾಂತಿ ಮೂಡಿಸಿದ ಮಾಜಿ ಪ್ರಧಾನಿ ದಿ.ಚೌದರಿ ಚರಣ್ ಸಿಂಗ್ ಸ್ಮರಣಾರ್ಥ ವಿಶ್ವ ರೈತದಿನಾಚರಣೆ ಆಚರಿಸಲಾಗುತ್ತದೆ. ಈ ನಿಟ್ಟಿನಲ್ಲಿ ರೈತ ನಾಯಕರು ಚರಣ್ ಸಿಂಗ್ ಹಾದಿಯಲ್ಲಿ ನಡೆಯಬೇಕೆಂದು ಸಲಹೆ ನೀಡಿದರು. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದು ವಿಶ್ವ ರೈತದಿನಾಚರಣೆ ನಡೆಯುತ್ತಿರುವುದು ಅತ್ಯಂತ ಸಂತೋಷದ ವಿಷಯ ಎಂದು ಹೇಳಿದ ಯದುವೀರ್, ರೈತ ಸುಖವಾಗಿದ್ದರೆ ಮಾತ್ರ ದೇಶ ಸುಖವಾಗಿರುತ್ತದೆ. ಈ ನಿಟ್ಟಿನಲ್ಲಿ ರೈತಬಣದ ಅಧ್ಯಕ್ಷರಾದ ಇಂಗಲಗುಪ್ಪೆ ಕೃಷ್ಣೇಗೌಡ ಅವರು ತಮ್ಮ ಪ್ರಾಮಾಣಿಕ ಪ್ರಯತ್ನಗಳ ಮೂಲಕ ರೈತರನ್ನು ಸಂಘಟಿಸಿ ಅವರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಇಂತಹ ನಾಯಕತ್ವ ರೈತರಿಗೆ ಬೇಕಿದೆ ಎಂದು ಶ್ಲಾಘಿಸಿದರು.
ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಮಹಾ ಒಕ್ಕೂಟದ ಅಧ್ಯಕ್ಷರಾದ ಬೀರಪ್ಪ ದೇಶನೂರು ಮಾತನಾಡಿ, ಸರ್ಕಾರಗಳು ರೈತಪರವಾದ ನಿಲುವು ತಾಳಬೇಕು. ದೇಶಕ್ಕೆ ಅನ್ನ ಕೊಡುವ ರೈತರಿಗೆ ಬೆಂಬಲವಾಗಿ ನಿಲ್ಲಬೇಕು ಎಂದರು.
ಮುಂದಿನ ವಿಶ್ವ ರೈತದಿನಾಚರಣೆಯನ್ನು ಬೆಳಗಾಂ ಜಿಲ್ಲೆಯಲ್ಲಿ ಆಚರಿಸುವುದಾಗಿ ಘೋಷಿಸಿದರು.
ಸರ್ಕಾರದಿಂದ ವಿಶ್ವ ರೈತ ದಿನಾಚರಣೆ ಆಚರಿಸಲಿ : ರೈತರನ್ನು ದೇಶದ ಬೆನ್ನೆಲುಬು ಎಂದು ರಾಜಕಾರಣಿಗಳು ಕೇವಲ ವೇದಿಕೆಗಳಲ್ಲಿ ಹೇಳುತ್ತಾರೆ. ಆದರೇ, ದೇಶಕ್ಕೆ ಅನ್ನ ನೀಡುವ ರೈತರನ್ನು ಸದಾ ಕಾಲ ನೆನೆಯಲು ವಿಶ್ವ ರೈತ ದಿನಾಚರಣೆಯನ್ನು ಸರ್ಕಾರವೇ ಆಚರಿಸಲಿ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ರೈತಸಂಘಟನೆಗಳ ಮಹಾ ಒಕ್ಕೂಟದ ಅಧ್ಯಕ್ಷರಾದ ಬೀರಪ್ಪ ದೇಶನೂರು, ಕರ್ನಾಟಕ ರಾಜ್ಯ ರೈತಸಂಘ(ರೈತಬಣ)ದ ಅಧ್ಯಕ್ಷರಾದ ಇಂಗಲಗುಪ್ಪೆ ಕೃಷ್ಣೇಗೌಡ, ರೈತ ಮುಖಂಡರಾದ, ಗಣೇಶ ಇಳಿಗೆರ, ಎನ್.ಎಂ.ಸಿದ್ದೇಶ್ ಉತ್ತಂಗಿ, ಮಲ್ಲೀಕ್ ಆವರ್ತಿ, ರವಿಕುಮಾರ್, ಬಸವನಗೌಡ ಪಾಟೀಲ್, ಬಿಡದಿ ಮಹೇಶ್, ರಾಮನಗರ ವಿನೂತಾಗೌಡ, ಈಶ್ವರ್ಗೌಡ, ನಾಗರಾಜ್ ಹೂಗಾರ್, ಕಂಠಿ, ಮಂಜು ಪಾಳ್ಯ, ಮಹಬೂಬ್ ಸಾಬ್, ಜವರನಾಯಕ, ಮಂಜುನಾಥ್, ಮಂಜುನಾಥ್ ಜಯಪುರ, ಭೈರೇಗೌಡ, ಹನುಮಂತಪ್ಪ ನಾಯಕ, ಕೃಷ್ಣೇಗೌಡ, ಈರಣ್ಣ ಅಂಗಡಿ, ವೆಂಕಟೇಶ್, ರಾಮೇಗೌಡ, ನಾಗರತ್ನ, ಮಂಗಳ, ಸುಜಾತಾ ಜಾಧವ್, ಜಯಶೀಲ, ರೇಖಾ, ನಾಗವೇಣಿ, ಜ್ಯೋತಿ, ಶೃತಿ, ಶಿವರಾಜು, ದ್ರಾಕ್ಷಿ ಶಿವರಾಮು, ಕೆಂಪರಾಜು, ದಯಾನಂದ ಮುಂತಾದವರು ವೇದಿಕೆಯಲ್ಲಿದ್ದರು.
ಹಸಿರು ಹೊದ್ದ ಸಾಂಸ್ಕೃತಿಕ ನಗರಿ
ಸಾಂಸ್ಕೃತಿಕ ನಗರಿಯಲ್ಲಿ ಸೋಮವಾರ ರೈತರ ಹಬ್ಬದ ವಾತಾವರಣ ಮೂಡಿಬಂತು. ಎಲ್ಲೆಡೆ ಹಸಿರು ಶಾಲುಗನ್ನು ಹೊದ್ದ ರೈತರು ಮತ್ತು ರೈತ ಮಹಿಳೆಯರು ಸಂಭ್ರಮದಿಂದ ವಿಶ್ವ ರೈತದಿನಾಚರಣೆಯಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ರೈತರಿಗೆ ವ್ಯವಸ್ಥಿತವಾದ ಊಟೋಪಚಾರ ಏರ್ಪಡಿಸಲಾಗಿತ್ತು.
ನಾಲ್ವಡಿ ಕೃಷ್ಣರಾಜ ಒಡೆಯರ್ ನೆನಪಿನಲ್ಲಿ ’ಮರೆಯೋದುಂಟೆ ಮೈಸೂರು ದೊರೆಯ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯ’ ಹಾಡು ಹಾಡಲಾಯಿತು. ಅಲ್ಲದೇ ಕಾರ್ಯಕ್ರಮದಲ್ಲಿ ರೈತಗೀತೆ, ನಾಡಗೀತೆ ಹಾಡಲಾಯಿತು.
ರಾಜಕಾರಣಿಗಳ ಗೈರು; ರೈತರ ಬೇಸರ
ಮೈಸೂರಿನಲ್ಲಿ ನಡೆದ ವಿಶ್ವ ರೈತ ದಿನಾಚರಣೆ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ಮಾಡಬೇಕಿತ್ತು. ಅಲ್ಲದೇ ಅನೇಕ ಸಚಿವರು ಮತ್ತು ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು. ಆದರೇ, ಯಾವುದೇ ರಾಜಕಾರಣಿಗಳು ಭಾಗವಹಿಸದ ಕಾರಣ ರೈತ ಮುಖಂಡರು ತಮ್ಮ ಭಾಷಣದಲ್ಲಿ ಬೇಸರ ವ್ಯಕ್ತಪಡಿಸಿದರು.
0 ಕಾಮೆಂಟ್ಗಳು