ಬಸ್ ನಿಲ್ದಾಣದ ಎರಡು ಗೋಪುರ ತೆರವುಗೊಳಿಸಿ ವಿವಾದಕ್ಕೆ ತೆರೆ ಎಳೆದ ಶಾಸಕ ರಾಮದಾಸ್

ಮೈಸೂರು : ಕಳೆದ ಒಂದು ತಿಂಗಳಿನಿಂದ ಒಂದೇ ಪಕ್ಷದ ಇಬ್ಬರು ರಾಜಕಾರಣಿಗಳ ನಡುವಿನ ವಾಕ್ಸಮರಕ್ಕೆ ಕಾರಣವಾಗಿದ್ದ ನಂಜನಗೂಡು ರಸ್ತೆ ಜೆಎಸ್‍ಎಸ್ ಕಾಲೇಜು ಮುಂಭಾಗದ ಬಸ್ ನಿಲ್ದಾಣದ ಎರಡು ಗೋಪುರಗಳನ್ನು ತೆರವು ಮಾಡುವ ಮೂಲಕ `ಗುಂಬಜ್’ ವಿವಾದಕ್ಕೆ ತೆರೆ ಎಳೆಯಲಾಗಿದೆ.  
ಶಾಸಕ ಎಸ್.ಎ.ರಾಮದಾಸ್ ಸುಮಾರು 10 ಲಕ್ಷ ರೂ. ಅನುದಾನ ನೀಡಿ ಈ ಬಸ್ ನಿಲ್ದಾಣ ನಿರ್ಮಿಸಿದ್ದರು. ಬಸ್ ನಿಲ್ದಾಣದ ಮೇಲೆ ಮೂರು ಗೋಪುರಗಳು ನಿರ್ಮಿಸಿದ್ದು, ನೋಡಲು ಆಕರ್ಷಕವಾಗಿತ್ತು. ಆದರೆ ಸಂಸದ ಪ್ರತಾಪ್ ಸಿಂಹ ಇವು ಗುಂಬಜ್ ಮಾದರಿ ಇವೆ. ಕೂಡಲೇ ಇವುಗಳನ್ನು ತೆರವು ಮಾಡಬೇಕು ಇಲ್ಲದಿದ್ದರೇ ನಾನೇ ಜೆಸಿಬಿ ತಂದು ಕೆಡವುತ್ತೇನೆ ಎಂದು ಹೇಳಿಕೆ ನೀಡಿದ್ದು ವಿವಾದಕ್ಕೆ ಕಾರಣವಾಗಿ ಇಬ್ಬರ ನಡುವಿನ ಶೀತಲ ಸಮರ ಮತ್ತಷ್ಟು ಉಲ್ಬಣಗೊಡಿತ್ತು. ಪ್ರತಾಪ್ ಸಿಂಹ ಬಸ್ ನಿಲ್ದಾಣ ಕೆಡುವುತ್ತೇನೆ ಎಂದಾಕ್ಷಣ ಬಸ್ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸುತ್ತೂರು ಶ್ರೀಗಳ ಭಾವಚಿತ್ರಗಳು ಕಂಡು ಬಂದವು. ನಂತರ ಇದ್ದಕ್ಕಿದ್ದಂತೆ ಚಿನ್ನದ ಬಣ್ಣದಲ್ಲಿದ್ದ ಗೋಪುರಗಳಿಗೆ ಕೆಂಪು ಬಣ್ಣ ಬಳಿಯಲಾಯಿತು. ಈ ನಡುವೆ ಬಸ್ ನಿಲ್ದಾಣದಿಂದ ಕೋಮು ಸಂಘರ್ಷಕ್ಕೆ ಕಾರಣವಾಗಿದೆ ಎಂದು ನ್ಯಾಷನಲ್ ಹೈವೆ ಪಾಲಿಕೆ ಮತ್ತು ಕೆಆರ್‍ಐಡಿಎಲ್ ಗೆ ನೊಟೀಸ್ ಜಾರಿ ಮಾಡಿ ಉತ್ತರಿಸಲು ವಾರದ ಗಡುವು ನೀಡಿತ್ತು. ಇದೇ ಸಮಯದಲ್ಲಿ ಸಂಸದ ಪ್ರತಾಪ್ ಸಿಂಹ ಬಸ್ ನಿಲ್ದಾಣದ ಮೂಲ ನಕ್ಷೆಯನ್ನು ಪ್ರದರ್ಶಿಸಿ ತಮ್ಮ ಗಡುವು ಸಹ ವಾರಕ್ಕೆ ಮುಂದೂಡಿದರು.
ಈ ವಿಚಾರಗಳು ದಿನನಿತ್ಯ ಪತ್ರಿಕೆ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಬಿತ್ತರವಾಗಿ ಕೆಲವರಿಗೆ ಪುಕ್ಕಟೆ ಮನರಂಜನೆ ನೀಡಿದರೆ, ಕೆಲವು ಹಿರಿಯ ನಾಗರಿಕರು ಬೇಸರಗೊಂಡು ಸಾರ್ವಜನಿಕವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಸಾಮಾಜಿಕ ಜಾಲತಾಣದಲ್ಲಿ ಹುಟ್ಟಿಕೊಂಡ ಈ ವಿವಾದವನ್ನು ಸಂಸದ ಪ್ರತಾಪ್ ಸಿಂಹ ಸಮರ್ಥವಾಗಿ ರಾಜಕಾರಣಕ್ಕೆ ಬಳಸಿಕೊಂಡಿದ್ದರು. ಈಗ ಅಂತಿಮವಾಗಿ ಪಕ್ಷದ ಹಿರಿಯರ ಮಾತಿಗೆ ಮಣಿದು ರಾಜಿ ಕಬೂಲಿ ನಡೆದು ಬಸ್ ನಿಲ್ದಾಣದ ಸೌಂದರ್ಯಕ್ಕೆ ಕಾರಣವಾಗಿದ್ದ ಎರಡು ಸಣ್ಣ ಗೋಪುರಗಳನ್ನು ಕೆಡವಿ ಮಧ್ಯದ ಗೋಪುರ ಉಳಿಸಿಕೊಳ್ಳಲಾಗಿದೆ. 
ಭಾನುವಾರ ಬೆಳಿಗ್ಗೆ ಶಾಸಕ ರಾಮದಾಸ್ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಅದರ ಸಾರಾಂಶ ಈ ರೀತಿ ಇದೆ.
``ಮೈಸೂರು ನಗರದ ನನ್ನ ಬಂಧುಗಳಲ್ಲಿ ನಿಮ್ಮ ಪ್ರೀತಿಯ ಎಸ್.ಎ.ರಾಮದಾಸ್‍ನ ನಮಸ್ಕಾರಗಳು.
`ನಮ್ಮ ನೆಚ್ಚಿನ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರ ಅಭಿವೃದ್ಧಿಯ ಪಥಕ್ಕೆ “ಸಬ್ ಕ ಸಾತ್ ಸಬ್ ಕ ವಿಕಾಸ್" ಮಂತ್ರ ಬಹಳ ಅವಶ್ಯಕವಾದದ್ದು. ಅಭಿವೃದ್ಧಿಯ ಕಾರ್ಯದಲ್ಲಿ ಸರ್ವ ಧರ್ಮ, ಜಾತಿ, ಪಂತ, ಪಕ್ಷ
ಭೇದವಿಲ್ಲದೆ ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ನನ್ನ 30 ವರ್ಷದ ರಾಜಕೀಯ ಜೀವನದಲ್ಲಿ ಪ್ರಮುಖವಾದದ್ದು. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಲ್ಲಿ ಯಾವುದೇ ವಿವಾದ ಇಂದಿನವರೆಗೂ ನಡೆದಿರುವುದಿಲ್ಲಾ. ನಾಗರೀಕರ ಸೌಲಭ್ಯಕ್ಕಾಗಿ 12 ಬಸ್ ತಂಗುದಾಣವನ್ನು ನಿರ್ಮಿಸಲು ಶಾಸಕರ ನಿಧಿಯಿಂದ ಕಾರ್ಯೋನ್ಮುಖವಾಗಿದ್ದು
ಸರಿಯμÉ್ಟ. ಮೈಸೂರು ಪಾರಂಪರಿಕ ನಗರಿಯಾಗಿದ್ದು ಪರಂಪರೆಯ ಮೊದಲು ಕುರುಹು ವಿಶ್ವವಿಖ್ಯಾತ ಮೈಸೂರು ಅರಮನೆ. ಈ ಮಾದರಿಯಲ್ಲಿ ಪಾರಂಪರಿಕ ಬಸ್ ತಂಗುದಾಣ ನಿರ್ಮಾಣ ನನ್ನ ಉದ್ದೇಶವಾಗಿತ್ತು.
ಆದರೆ ಅದಕ್ಕೆ ಅನಾವಶ್ಯಕ ಧರ್ಮದ ಲೇಪನ ನೀಡಿ ಅದೊಂದು ವಿವಾದ ಸ್ಥಳವಾಗಿ ಪರಿವರ್ತನೆ ಮಾಡುವ ಪ್ರಯತ್ನ ಮನಸ್ಸಿಗೆ ತುಂಬ ನೋವುಂಟು ಮಾಡಿರುತ್ತದೆ. ಅದ್ದರಿಂದ ಎಲ್ಲ ಹಿರಿಯರು, ಸಲಹೆಗಾರರ ಜೊತೆಯಲ್ಲಿ ನನ್ನ ಅಳಲು ತೋಡಿಕೊಂಡು ಮುಂದೆ ಎಂದೂ ಇದೊಂದು ವಿವಾದಿತ ಕೇಂದ್ರ ಎಂಬ ಕಪ್ಪು ಚುಕ್ಕೆ ಕೆಲವರು ನಿರ್ಮಾಣ ಮಾಡಬಾರದೆಂದು ಬಸ್ ನಿಲ್ದಾಣದ ಎರಡು ಡೂಮ್ ಅನ್ನು ತೆಗೆದು ಮದ್ಯದ ಡೂಮ್ ಅನ್ನು ಯಥಾಸ್ಥಿತಿಯಲ್ಲಿ ಬಿಟ್ಟು ಇದೇ ಮಾದರಿಯಲ್ಲಿ ನಿರ್ಮಾಣ ಮಾಡಲು ಒಪ್ಪಿಗೆ ಪಡೆಯಲಾಗಿದೆ. ಸಾರ್ವಜನಿಕರ ಅಭಿವೃದ್ಧಿ ಮಂತ್ರ ನನ್ನ ಧ್ಯೇಯ ಇದನ್ನು ಯಾರು ಅನ್ಯತಾ ಭಾವಿಸಬಾರದೆಂದು ಕೋರುತ್ತೇನೆ. 
ವಂದನೆಗಳೊಂದಿಗೆ 
ಎಸ್.ಎ.ರಾಮದಾಸ್
ಶಾಸಕರು


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು