ಮೈಸೂರು ಮೇಲ್.ಕಾಂ ವರದಿ ಫಲಶ್ರುತಿ ಅಂಬಿಕಾಪುರಕ್ಕೆ ತಹಸಿಲ್ದಾರ್ ಭೇಟಿ, ಸ್ಮಶಾನಕ್ಕೆ ಜಮೀನು ಪರಿಶೀಲನೆ, ಶೀಘ್ರ ಮಂಜೂರು ಭರವಸೆ
ನವೆಂಬರ್ 01, 2022
ವರದಿ-ಶಾರುಕ್ ಖಾನ್, ಹನೂರು
ಹನೂರು : ಆದಿ ಜಾಂಭವ ಸಮುದಾಯಕ್ಕೆ ನಿಗದಿತ ಸ್ಮಶಾನ ಇಲ್ಲದ ಕಾರಣ ತಾಲ್ಲೂಕಿನ ಅಂಬಿಕಾಪುರ ಗ್ರಾಮದಲ್ಲಿ ಮೃತದೇಹ ಹೊತ್ತುಕೊಂಡು ತುಂಬಿ ಹರಿಯುತ್ತಿರುವ ಹಳ್ಳ ದಾಟಿ ದಡದಲ್ಲೇ ಅಂತ್ಯಸಂಸ್ಕಾರ ನಡೆಸಿದ ಮನಃ ಕಲಕುವ ಘಟನೆ ಕೊನೆಗೂ ತಾಲ್ಲೂಕು ಆಡಳಿತದ ಹೃದಯಕ್ಕೆ ತಟ್ಟಿದ್ದು, ತಹಶೀಲ್ದಾರ್ ಆನಂದಯ್ಯ ಗ್ರಾಮಕ್ಕೆ ಭೇಟಿ ನೀಡಿ ಸ್ಮಶಾನಕ್ಕೆ ಭೂಮಿ ಪರಿಶೀಲಿಸಿದ್ದು, ಶೀಘ್ರದಲ್ಲೇ ಮಂಜೂರು ಮಾಡುವ ಭರವಸೆ ನೀಡಿದ್ದಾರೆ. ಅಜ್ಜಿಪುರ ಗ್ರಾಪಂ ವ್ಯಾಪ್ತಿಯ ಅಂಬಿಕಾಪುರ ಗ್ರಾಮದಲ್ಲಿ ಕಳೆದ ಮೂರು ದಿನಗಳ ಹಿಂದೆ ಪಳನಿಯಮ್ಮ ಎಂಬ ಮಹಿಳೆ ಮೃತಪಟ್ಟಿದ್ದರು. ಸ್ಮಶಾನ ಇಲ್ಲದ ಕಾರಣ ಉಡುತೊರೆ ಹಳ್ಳದಲ್ಲಿ ನೀರು ತುಂಬಿ ಹರಿಯುತ್ತಿದ್ದರೂ ವಿಧಿ ಇಲ್ಲದೇ ಹಳ್ಳದ ಪಕ್ಕದಲ್ಲಿಯೇ ಅಂತ್ಯಕ್ರಿಯೆ ಮಾಡಲಾಗಿತ್ತು. ಈ ಬಗ್ಗೆ ಮೈಸೂರು ಮೇಲ್.ಕಾಂ ವೆಬ್ ಚಾನಲ್ ವಿಸ್ತøತ ವರದಿ ಪ್ರಕಟಿಸಿ ತಾಲ್ಲೂಕು ಆಡಳಿತ ಮತ್ತು ಶಾಸಕರ ಗಮನ ಸೆಳೆದಿತ್ತು. ವರದಿ ಹಿನ್ನೆಲೆ ತಹಸಿಲ್ದಾರ್ ಗ್ರಾಮಕ್ಕೆ ಭೇಟಿ ನೀಡಿ ಸ್ಮಶಾನಕ್ಕೆ ಸರ್ಕಾರಿ ಜಮೀನು ಗೊತ್ತು ಮಾಡಿ ಸ್ಮಶಾನಕ್ಕೆ ಬಿಟ್ಟು ಕೊಡುವ ವ್ಯವಸ್ಥೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಈ ವೇಳೆ ದಸಂಸ ಸಂಚಾಲಕ ಸಿದ್ದರಾಜು, ಬಣ್ಣಾರಿ, ಶಿವಕುಮಾರ್, ಪಳನಿಸ್ವಾಮಿ, ಅಣ್ಣಾದೊರೆ, ಮುರಳಿ, ಮುರುಗೇಶ್, ಪಾಪಮ್ಮ, ಶಿವಮ್ಮ, ಪ್ರಭು, ಪೆರುಮಾಳ್ ಸೇರಿದಂತೆ ಗ್ರಾಮಸ್ಥರು ಇದ್ದರು.
0 ಕಾಮೆಂಟ್ಗಳು