ಆಧುನಿಕ ಭಗೀರಥ, ರಾಜ್ಯೋತ್ಸವ, ಬಸವ ಪ್ರಶಸ್ತಿ ಪುರಸ್ಕøತ ಕೆರೆ ಕಾಮೇಗೌಡ ನಿಧನ

ಸ್ವಂತ ಹಣದಲ್ಲಿ 17 ಕೆರೆಗಳ ನಿರ್ಮಾಣ  
 ಮಂಡ್ಯ : ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಆಧುನಿಕ ಕೆರೆ ನಿರ್ಮಾತೃ ಖ್ಯಾತಿಯ ಕೆರೆ ಕಾಮೇಗೌಡ ಮಳವಳ್ಳಿ ತಾಲೂಕಿನ ದಾಸನದೊಡ್ಡಿ ನಿವಾಸದಲ್ಲಿ ನಿಧನರಾಗಿದ್ದಾರೆ. 
ಕುಂದೂರು ಬೆಟ್ಟದಲ್ಲಿ ಅಂತರ್ಜಲ ವೃದ್ಧಿಗಾಗಿ 17ಕ್ಕೂ ಹೆಚ್ಚು ಕೆರೆಗಳನ್ನು ನಿರ್ಮಿಸಿ ಆಧುನಿಕ ಭಗೀರಥ ಎಂದೇ ಖ್ಯಾತಿ ಪಡೆದಿದ್ದರು. ಇವರಿಗೆ ರಾಜ್ಯೋತ್ಸವ ಪ್ರಶಸ್ತಿ, ಬಸವ ಪ್ರಶಸ್ತಿ ದೊರಕಿದ್ದವು. ಜತೆಗೆ ಪ್ರಧಾನಿ ಮೋದಿ ಅವರಿಂದಲೂ ಪ್ರಶಂಸೆ ಪಡೆದಿದ್ದರು.

ಕುಂದೂರು ಬೆಟ್ಟದಲ್ಲಿ ಸಾವಿರಾರು ಮರ ಗಿಡ ನೆಟ್ಟು ಬೆಳೆಸಿದ್ದ ಈ ಪರಿಸರ ಪ್ರೇಮಿ ಅನಕ್ಷರಸ್ಥರಾಗಿದ್ದರೂ ಇವರ ಕೆಲಸಕ್ಕೆ ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸಿತ್ತು. ತಮ್ಮ ಗ್ರಾಮದ ಪಕ್ಕದಲ್ಲಿರುವ ಕುಂದೂರು ಬೆಟ್ಟದಲ್ಲಿ ಸುಮಾರು 17 ಕೆರೆಗಳನ್ನು ತಮ್ಮ ಜೀವನದಲ್ಲಿ ದುಡಿದ ಸ್ವಂತ ಹಣದಲ್ಲಿ ನಿರ್ಮಿಸಿದ್ದಾರೆ.
ಈ ಕೆರೆಗಳ ನಿರ್ಮಾಣದ ಮೂಲಕ ಈ ಕಾಡಿನ ಪಕ್ಷಿ, ಪ್ರಾಣಿಗಳಿಗೆ ನೀರು ಒದಗಿಸುವ ಕೆಲಸ ಮಾಡಿದ್ದಾರೆ. ಅಲ್ಲದೇ ಈ ಕೆರೆ ನಿರ್ಮಾಣದ ಮೂಲಕ ಅಂತರ್ಜಲ ವೃದ್ದಿ ಮಾಡಿದ್ದಾರೆ.

ಕಾಮೇಗೌಡರ ಈ ಕಾರ್ಯವನ್ನು ದೇಶದ ಪ್ರಧಾನಿ ಮೋದಿ ಕೂಡ ಶ್ಲಾಘಿಸಿದ್ದರು, ತಮ್ಮ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಕಾಮೇಗೌಡರ ಕಾರ್ಯವನ್ನು ಪ್ರಶಂಸೆ ಮಾಡಿದ್ದರು.
ಕಲ್ಮನೆ ಕಾಮೇಗೌಡರಿಗೆ ಇಬ್ಬರು ಮಕ್ಕಳು ಇದ್ದು, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ದಾಸನದೊಡ್ಡಿ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು