ಟಿಪ್ಪು ನಿಜ ಕನಸುಗಳು ನಾಟಕ ಪ್ರದರ್ಶನ ಕುರಿತು ರಂಗಾಯಣದ ಮಾಜಿ ನಿರ್ದೇಶಕ ಜನಾರ್ಧನ್ (ಜನ್ನಿ) ಆಕ್ರೋಶ
ಮೈಸೂರು : ನಾಟಕಗಳು ನಾಡಿನ ಸಾಂಸ್ಕøತಿಕ ಹಿರಿಮೆಯನ್ನು ಹೆಚ್ಚಿಸುತ್ತವೆ. ಆದರೆ, ಟಿಪ್ಪು ನಿಜ ಕನಸುಗಳು ನಾಟಕವನ್ನು ಪೊಲೀಸ್ ಸರ್ಪಗಾವಲಿನಲ್ಲಿ ನಡೆಸುವ ಮೂಲಕ ಇಡೀ ಸಾಂಸ್ಕøತಿಕ ಲೋಕವೇ ತಲೆತಗ್ಗಿಸುವಂತೆ ಮಾಡಿದೆ. ಇದು ರಂಗಾಯಣಕ್ಕೆ ಮಾಡಿದ ಅಪಮಾನ ಎಂದು ರಂಗಾಯಣದ ಮಾಜಿ ನಿರ್ದೇಶಕ ಜನಾರ್ಧನ್ (ಜನ್ನಿ) ಆಕ್ರೋಶ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಟಕ ಎಂಬುದು ಸತ್ಯವನ್ನು ಹೇಳುವಂತಹದು. ಅಂತಹ ನಾಟಕಗಳನ್ನು ಪ್ರದರ್ಶಿಸುವ ಮೂಲಕ ರಂಗಭೂಮಿ ಮತ್ತು ಕಲಾವಿದರ ಗೌರವ ಹೆಚ್ಚಿಸುವಂತೆ ಆಗಬೇಕು. ಆದರೆ ಈಗಿನ ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಟಿಪ್ಪು ನಿಜ ಕನಸುಗಳು ನಾಟಕವನ್ನು ಬರೆದು ಬರೀ ಸುಳ್ಳಗಳನ್ನೇ ಪ್ರದರ್ಶನ ಮಾಡುತ್ತಿರುವುದು ರಂಗಾಯಣದ ದುರ್ಧೈವ. ಇಂತಹ ಘಟನೆ ದೇಶದ ಯಾವ ರಂಗಾಯಣದ ಇತಿಹಾಸದಲ್ಲೂ ನಡೆದಿಲ್ಲ ಎಂದರು.
ಈ ಹಿಂದೆ ರಂಗಾಯಣವನ್ನು ಕಾರಂತರು, ಪ್ರಸನ್ನ, ಚಿದಂಬರ ರಾವ್ ಜಂಬೆ, ಸಿ.ಬಸವಲಿಂಯ್ಯ ಮತ್ತು ನಾನು ಸೇರಿದಂತೆ ಅನೇಕರು ಶ್ರಮಪಟ್ಟು ಕಟ್ಟಿದ್ದೇವೆ. ಅಂತಹ ರಂಗಾಯಣ ಇಂದು ತನ್ನ ಘನತೆಯನ್ನು ಕಳೆದುಕೊಳ್ಳುತ್ತಿರುವುದು ಮನಸ್ಸಿಗೆ ನೋವುಂಟು ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಟಿಪ್ಪು ಕನಸಗಳನ್ನು ಕಂಡಿದ್ದ ಎಂದರೆ ನಂಬಬಹುದು. ಆದರೆ ಟಿಪ್ಪು ನಿಜ ಕನಸುಗಳು ಗೊತ್ತಾಗುವುದು ಆತನೊಂದಿಗೆ ಸಂಸಾರ ಮಾಡಿದ್ದರೆ ಮಾತ್ರ. ಟಿಪ್ಪು ನಿಜ ಕನಸುಗಳು ನಾಟಕ ಮಾಡುತ್ತೇನೆ ಎಂದರೆ ಆತ ಟಿಪ್ಪು ಜೊತೆಗೆ ಸಂಸಾರ ಮಾಡಿರಬೇಕು, ಇಲ್ಲ ಅವನ ಸಹೋದರ, ಸ್ನೇಹಿತ, ಅಥವಾ ಅವನ ಸೈನ್ಯದ ಸೈನಿಕನಾದರೂ ಆಗಿರಬೇಕು. ಅದು ಬಿಟ್ಟು ಸುಳ್ಳುಗಳನ್ನು ಹೇಳಿ ನಾಟಕ ಮಾಡುವ ಕೆಲಸ ಮಾಡಬಾರದು ಎಂದು ಕಿಡಿಕಾರಿದರು.
ಒಂದು ನಾಟಕ ಮಾಡಿದರೆ. ಪ್ರೇಕ್ಷಕರು ಹಾತೊರೆಯುವಂತಿರಬೇಕು. ಅದು ಬಿಟ್ಟು ನಾಟಕ ನೋಡಲು ಬರುವವರನ್ನು ಎಲ್ಲಿಂದ ಬಂದೆ. ಹೇಗೆ ಬಂದೆ ಎಂದು ಪೊಲೀಸರ ಮೂಲಕ ಪರಿಶೀಲಿಸಿ ಆವರಣದೊಳಗೆ ಕಳುಹಿಸುವುದಲ್ಲ. ಇವರಿಗೆ ನಿಜವಾಗಲು ತಮ್ಮ ನಾಟಕ ಸರಿಯಾಗಿದೆ ಎನ್ನುವುದಾದರೆ ಪರ ವಿರೋಧ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.
ನಾನು ರಂಗಾಯಣದ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ನನ್ನ ಅವಧಿಯಲ್ಲಿ ಮುಖ್ಯಮಂತ್ರಿಗಳು ನಾಟಕ ನೋಡಲು ರಂಗಾಯಣಕ್ಕೆ ಬಂದಿದ್ದರು. ಆಗ ಪೊಲೀಸರು ಭದ್ರತೆ ದೃಷ್ಟಿಯಿಂದ ರಂಗಾಯಣದ ಆವರಣದಲ್ಲಿ ಬೀಡು ಬಿಟ್ಟಿದ್ದರು. ಆಗ ಇದು ಸಾಂಸ್ಕøತಿಕ ಲೋಕ ಇಲ್ಲಿ ಪೊಲೀಸರ ಅಗತ್ಯವಿಲ್ಲ ಎಂದಾಗ ಅವರು ಪೊಲೀಸರನ್ನು ಅಲ್ಲಿಂದ ವಾಪಸ್ ಕರೆದುಕೊಂಡು ಹೋದರು.
ರಂಗಾಯಣದಂತಹ ಪವಿತ್ರ ಭೂಮಿಯಲ್ಲಿ ಪ್ರೇಕ್ಷಕರಿಗೆ ಪೊಲೀಸರನ್ನು ಜೊತೆಗೆ ಇಟ್ಟು ನಾಟಕ ನೋಡಿಸುವ ದುರಂತ ನಿಜಕ್ಕೂ ನಾಚಿಕೆಗೇಡು. ಇಂತಹ ವ್ಯವಸ್ಥೆಯನ್ನು ರಂಗಾಯಣಕ್ಕೂ ಎಳೆದು ತಂದರಲ್ಲ ಎಂದು ನೋವಾಗುತ್ತಿದೆ ಎಂದರು. ಪ್ರದೀಪ್, ಎಂ.ಎಫ್.ಕಲೀಂ ಇದ್ದರು.
0 ಕಾಮೆಂಟ್ಗಳು