ಮೈಸೂರು : ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕು ಹುಲಿಕೆರೆ ಗ್ರಾಮ ಪಂಚಾಯ್ತಿಯ ಅವ್ವೇರಹಳ್ಳಿ ಮೂಲಕ ಹಾದುಹೋಗುವ ಶ್ರೀರಂಗಪಟ್ಟಣ-ಕುಶಾಲನಗರ ಎಕ್ಸ್ಪ್ರೆಸ್ ಹೈವೆ ರಸ್ತೆಯಿಂದ ಈ ಭಾಗದ 8 ಗ್ರಾಮಗಳ ಸಂಪರ್ಕ ರಸ್ತೆಗಳು ಕಡಿತವಾಗುತ್ತಿದ್ದು, ಕೂಡಲೇ ಕೆಳ ಸೇತುವೆ ನಿರ್ಮಿಸಿ ಎಂದು ಆಗ್ರಹಿಸಿ ಅವ್ವೇರಹಳ್ಳಿ ಮತ್ತು ಸುತ್ತಮುತ್ತಲಿನ ರೈತರು ಗುರುವಾರ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೈತ ಮುಖಂಡರಾದ ಶಿವಾಜಿ, ಹುಲಿಕೆರೆ ವೈರಮುಡಿಗೌಡ, ಇಲವಾಲ ಶಿವೇಗೌಡ, ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ರಾಷ್ಟ್ರೀಯ ಹೆದ್ದಾರಿ ನಂ.275ರಲ್ಲಿ ನಿರ್ಮಿಸುತ್ತಿರುವ ಶ್ರೀರಂಗಪಟ್ಟಣ-ಕುಶಾಲನಗರ ಎಕ್ಸ್ಪ್ರೆಸ್ ಹೈವೆ ರಸ್ತೆಯು ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣ ತಾಲ್ಲೂಕು, ಹುಲಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅವೇರಹಳ್ಳಿ ಮೂಲಕ ಹಾದು ಹೋಗುತ್ತಿದೆ. ಇದರಿಂದ ಇಲ್ಲಿ ಈಗಾಗಲೇ ಸುಮಾರು 60 ವರ್ಷಗಳ ಹಳೆಯದಾದ 40 ಅಡಿ ಸಂಪರ್ಕ ರಸ್ತೆ ಕಡಿತಗೊಳ್ಳಲಿದೆ. ಇದರಿಂದ ಈ ಭಾಗದ ಹುಲಿಕೆರೆ, ಅವೇರಹಳ್ಳಿ, ಹೊಸಹುಂಡಿ, ಸಂಕಳ್ಳಿಕೊಪ್ಪಲು ಮತ್ತು ಮೈದನಹಳ್ಳಿ ಸೇರಿದಂತೆ 5 ಗ್ರಾಮಗಳ ಸುಮಾರು ಐದು ಸಾವಿರ ಎಕರೆ ವ್ಯವಸಾಯದ ಭೂಮಿಗೆ ಹೋಗುವ ಸಂಪರ್ಕ ರಸ್ತೆಯು ಕಡಿತವಾಗಲಿದ್ದು, ಸಾವಿರಾರು ರೈತರಿಗೆ ಅನಾನುಕೂಲ ಉಂಟಾಗಲಿದೆ.
ಈಗ ನಿರ್ಮಾಣವಾಗುತ್ತಿರುವ ಎಕ್ಸ್ಪ್ರೆಸ್ ಹೈವೆಯು ಈ 40 ಅಡಿ ರಸ್ತೆಯ ಮೂಲಕ ಹಾದು ಹೋಗುತ್ತಿದ್ದು ಗ್ರಾಮಸ್ಥರಿಗೆ ತಮ್ಮ ಜಮೀನಿನ ಸಂಪರ್ಕವನ್ನು ಸಂಪೂರ್ಣವಾಗಿ ಕಡಿತಗೊಳಿಸುತ್ತಿದೆ. ಹಾಗಾಗಿ, ಇಲ್ಲಿನ ಗ್ರಾಮಸ್ಥರು ತಮ್ಮ ಕೃಷಿ ಉತ್ಪನ್ನಗಳ ಸಾಗಾಟಕ್ಕೆ ಸಂಪರ್ಕ ರಸ್ತೆ ಇಲ್ಲದೆ ತೊಂದರೆ ಅನುಭವಿಸುವಂತಾಗುತ್ತಿದೆ ಎಂದು ಆರೋಪಿಸಿದರಲ್ಲದೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಕೂಡಲೇ ರೈತರ ಸಮಸ್ಯೆ ಬಗ್ಗೆ ಬೆಳಕು ಚೆಲ್ಲಿ
ಅನ್ವೇರಹಳ್ಳಿ ಗ್ರಾಮದ ಬಳಿ ಕೆಳಸೇತುವೆ ನಿರ್ಮಾಣ ಮಾಡಿಸಿ ಗ್ರಾಮಸ್ಥರ ಜಮೀನಿಗೆ ಸಂಪರ್ಕ ಕಲ್ಪಿಸಿಕೊಡಬೇಕು. ಇಲ್ಲದಿದ್ದಲ್ಲಿ ಕಾಮಗಾರಿ ನಡೆಯುವ ಸ್ಥಳದಲ್ಲಿ ರೈತರು ನಿರಂತರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ಈ ಹಿಂದೆಯೂ ಹೆದ್ದಾರಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಈ ಬಗ್ಗೆ ಮನವಿ ಸಲ್ಲಿಸಿದ್ದರೂ ಅವರು ಯಾವುದೇ ಕ್ರಮ ಕೈಗೊಳ್ಳದೆ ರೈತರ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಹೇಳಿದರಲ್ಲದೇ, ಈ ಬಾರಿ ಕೆಳ ಸೇತುವೆ ನಿರ್ಮಾಣಕ್ಕೆ ಮುಂದಾಗದಿದ್ದರೆ ನಾವು ಐದೂ ಗ್ರಾಮದ ರೈತರು ಒಗ್ಗೂಡಿ ಪ್ರತಿಭಟನೆ ನಡೆಸುವುದಾಗಿ ಹೇಳಿದರು.
ಪ್ರತಿಭಟನೆಯಲ್ಲಿ ಹಲಗೇಹುಂಡಿ ಮಹದೇವು, ಮೈಸೂರು ಕೃಷ್, ಮಹೇಶ, ನವೀನ್, ಯಶವಂತ ಸೇರಿದಂತೆ ಹಲವಾರು ರೈತರು ಇದ್ದರು.
ಸಂಪರ್ಕ ರಸ್ತೆ ಕಡಿತದಿಂದ ನಾವು ನಮ್ಮ ಜಮೀನುಗಳಿಗೆ ಹೋಗಲು ಎಂಟು ಕಿಮಿ ಬಳಸಬೇಕಿದೆ. ಕೆಳ ಸೇತುವೆ ನಿರ್ಮಿಸಿ ರೈತರಿಗೆ ಅನುಕೂಲ ಮಾಡಿಕೊಡಿ ಇಲ್ಲದಿದ್ದಲ್ಲಿ ಕಾಮಗಾರಿ ನಿಲ್ಲಿಸಿ ಎಂದು ಈ ಭಾಗದ ಐದೂ ಗ್ರಾಮಗಳ ರೈತರು ಕೆ.ಎನ್.ಆರ್ ಕನ್ಸ್ಟ್ರಕ್ಷನ್ ಕಂಪನಿಗೆ ಮತ್ತು ಹೆದ್ದಾರಿ ಪ್ರಾಧಿಕಾರಕ್ಕೆ
ಮನವಿಯನ್ನು ನೀಡಿದ್ದೇವೆ. ಇವರು ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ಪ್ರಾಧಿಕಾರವು ಗ್ರಾಮಸ್ಥರ
ಬೇಡಿಕೆಯನ್ನು ಈಡೇರಿಸದಿದ್ದರೆ ರಸ್ತೆ ನಿರ್ಮಾಣದ ಕೆಲಸವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ಉಗ್ರ ಪ್ರತಿಭಟನೆಯನ್ನು ಮಾಡುತ್ತೇವೆ. ಇದಕ್ಕೆ ಹುಲಿಕೆರೆ ಹಾಗೂ ಸುತ್ತಮುತ್ತಲಿನ
ಗ್ರಾಮದ ನೂರಾರು ರೈತರು ಭಾಗವಹಿಸಲಿದ್ದಾರೆ.
ಶಿವಾಜಿ, ರೈತ ಮುಖಂಡರು
0 ಕಾಮೆಂಟ್ಗಳು